ನವದೆಹಲಿ, ಏ 13 (DaijiworldNews/MS): "ಸರ್ಕಾರವು ಇತಿಹಾಸವನ್ನು ಬದಲಾಯಿಸುವುದಿಲ್ಲ ಅಥವಾ ಪುನರ್ರಚಿಸುವುದಿಲ್ಲ. ಆದರೆ ತೆರೆಮರೆಗೆ ಸರಿದ ನಾಯಕರನ್ನೂ ಹಾಗೂ 'ಎಲ್ಲಾ ಐತಿಹಾಸಿಕ ಸತ್ಯವನ್ನು' ಹೊರತರಲು ಪ್ರಯತ್ನಿಸುತ್ತದೆ" ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಶತಮಾನಗಳಿಂದಲೂ ಲಕ್ಷಾಂತರ ಮಂದಿ ದೇಶದ ನಾಗರಿಕತೆಯನ್ನು ರಕ್ಷಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಆದರೆ, ಅದು ನಮ್ಮ ಇತಿಹಾಸದ ಭಾಗವಾಗಲಿಲ್ಲ" ಎಂದಿದ್ದಾರೆ.
"ಭಾರತದ ಸ್ವಾತಂತ್ರ್ಯದ ನಂತರ, ಅದರ ಇತಿಹಾಸವನ್ನು ಕೆಲವು ಗಂಟೆಗಳು, ಕೆಲವು ವರ್ಷಗಳು, ಹಾಗೂ 3-4 ಕುಟುಂಬಗಳಿಗೆ ಸೀಮಿತಗೊಳಿಸಲು ಪ್ರಯತ್ನಿಸಲಾಯಿತು, ಆದರೆ ಭಾರತದ ಇತಿಹಾಸಕ್ಕೆ ಸಂಬಂಧಿಸಿದ ಕನಿಷ್ಠ 2,500 ವರ್ಷಗಳ ಸಾಹಿತ್ಯಗಳು ಲಭ್ಯವಿವೆ" ಎಂದು ಅವರು ಹೇಳಿದ್ದಾರೆ
"ದೇಶದ ಶ್ರೀಮಂತ ಮತ್ತು ಭವ್ಯವಾದ ಇತಿಹಾಸವು ಕೇವಲ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತವಾಗಿಲ್ಲ ಆದರೆ ಅದು ಬುದ್ಧ ಮತ್ತು ಚಂದ್ರಗುಪ್ತ ಮೌರ್ಯರ ಹಿಂದಿನ ಕಾಲಕ್ಕೂ ಹೋಗುತ್ತದೆ, ಇದು ಭಾರತವನ್ನು ವಿಶ್ವದ ಅತ್ಯಂತ ಹಳೆಯ ನಾಗರಿಕತೆಯನ್ನಾಗಿ ಮಾಡಿದೆ. ಮಹಾರಾಣಾ ಪ್ರತಾಪ್, ಛತ್ರಪತಿ ಶಿವಾಜಿ, ಬೀರ್ ಬಲ್, ತೋಡರ್ಮಲ್, ಚಾಣಕ್ಯ, ಅವರ ಬಗ್ಗೆಯೂ ಓದುವ ಅವಶ್ಯಕತೆಯಿದೆ. ಹೀಗಾಗಿ ಮರೆತುಹೋದ ನಾಯಕರನ್ನು ರಾಷ್ಟ್ರದ ಇತಿಹಾಸದ ಭಾಗವಾಗಿಸುವ ಸಮಯ ಇಂದು ಬಂದಿದೆ" ಎಂದು ಹೇಳಿದ್ದಾರೆ.