ಜೈಪುರ, ಏ 13 (DaijiworldNews/DB): ರಾಜಸ್ಥಾನದ ಹಿಂಸಾಚಾರ ಪೀಡಿತ ಕರೌಲಿಗೆ ಭೇಟಿ ನೀಡಲು ಯತ್ನಿಸಿದ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ತೇಜಸ್ವಿ ಸೂರ್ಯ ಹಲವು ಬೆಂಬಲಿಗರೊಂದಿಗೆ ಕರೌಲಿಗೆ ಭೇಟಿ ನೀಡಲು ಯತ್ನಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಸೂರ್ಯ ಸಹಿತ ಬೆಂಬಲಿಗರನ್ನು ವಶಕ್ಕೆ ತೆಗೆದುಕೊಂಡರು. ಈ ವೇಳೆ ಮಾತನಾಡಿದ ಅವರು, ನಾವು ಕರೌಲಿಗೆ ಶಾಂತಿಯುತವಾಗಿಯೇ ಹೋಗುತ್ತೇವೆ. ಪೊಲೀಸರು ತಡೆದರೆ, ಸಾಮೂಹಿಕ ಬಂಧನದಲ್ಲಿರುತ್ತೇವೆ ಎಂದರು. ಇದಕ್ಕೂ ಮೊದಲು ತಾವು ಕರೌಲಿಗೆ ಭೇಟಿ ನೀಡುವ ಬಗ್ಗೆ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು.
ಬಿಜೆಪಿಯವರು ಕರೌಲಿಗೆ ಭೇಟಿ ನೀಡುವುದನ್ನು ಬ್ಯಾರಿಕೇಡ್ ನಿರ್ಮಿಸಿ ಕಾಂಗ್ರೆಸ್ ಸರ್ಕಾರವು ನಿರ್ಬಂಧಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬೆಂಬಲಿಗರು ಬ್ಯಾರಿಕೇಡ್ ದಾಟಲು ಯತ್ನಿಸಿದರು.
ಕರೌಲಿಯಲ್ಲಿ ಏಪ್ರಿಲ್ 2 ರಂದು ಎರಡು ಸಮುದಾಯಗಳ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಒಂದು ವಾರದವರೆಗೆ ಕರ್ಫ್ಯೂ ವಿಧಿಸಲಾಗಿತ್ತು. ಯುಗಾದಿಯಂದು ನಡೆದ ಬೈಕ್ ರ್ಯಾಲಿ ಮೇಲೆ ಕಲ್ಲು ತೂರಾಟ ಘಟನೆ ನಡೆದಿತ್ತು. ಅಲ್ಲದೆ ಹಲವು ವಿದ್ವಂಸಕ ಕೃತ್ಯ ನಡೆದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರುವ ದೃಷ್ಟಿಯಿಂದ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದರು.