ಶಿವಮೊಗ್ಗ, ಏ 13 (DaijiworldNews/HR): ವಾಟ್ಸಾಪ್ ಬರಹ ಡೆತ್ ನೋಟ್ ಅಲ್ಲ, ನಾನು ರಾಜೀನಾಮೆ ಕೊಡೋ ಪ್ರಶ್ನೆಯೇ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಇಲಾಖೆಯಿಂದ ಸಂತೋಷ್ ಅವರಿಗೆ ವರ್ಕ್ ಆರ್ಡರ್ ಕೊಟ್ಟಿಲ್ಲವೆಂದು ಸ್ಪಷ್ಟವಾಗೇ ಹೇಳಲಾಗಿದೆ. ಹೀಗಿದ್ದೂ ನನ್ನ ವಿರುದ್ಧ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಪಕ್ಷದವರು ಒತ್ತಾಯಿಸುತ್ತಿದ್ದಾರೆ. ಯಾವುದೇ ದಾಖಲೆ ಇಲ್ಲದೇ ನಾನು ರಾಜೀನಾಮೆ ನೀಡೋ ಪ್ರಶ್ನೆಯೇ ಇಲ್ಲ ಎಂದರು.
ನಾನು ರಾಜೀನಾಮೆ ಕೊಡುವುದಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷರಿಗೆ, ಸಿಎಂ ಬಸವರಾಜ ಬೊಮ್ಮಾಯಿಗೂ ತಿಳಿಸಿದ್ದೇನೆ. ವಾಟ್ಸಾಪ್ ಬರಹ ಡೆತ್ ನೋಟ್ ಅಲ್ಲ. ಈ ಕಾರಣಕ್ಕೇ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡೋ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಇನ್ನು ಸಂತೋಷ್ ಅವರು ಡೆತ್ ನೋಟೇ ಬರೆದಿಲ್ಲ. ಡೆತ್ ನೋಟ್ ಬರದೇ ಇದ್ದರೂ ಬರೆದಿದ್ದಾರೆ ಎಂದು ಸುಳ್ಳು ಮಾಹಿತಿ ಹಬ್ಬಿಸಿ, ಮತ್ತೆ ರಾಜೀನಾಮೆ ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ನಮ್ಮ ಇಲಾಖೆಯಲ್ಲಿ ಯಾವುದೇ ಕಾಮಗಾರಿ ಮಾಡಬೇಕಾದ್ರೇ, ಮೊದಲು ಆಡಳಿತಾತ್ಮಕ ಅನುಮೋದನೆ, ಟೆಕ್ನಿಕಲ್ ಅನುಮೋದನೆ, ಸ್ಯಾಂಕ್ಷನ್ ಮಾಡಬೇಕು. ವರ್ಕ್ ಆರ್ಡರ್ ಇಷ್ಯೂವಾಗಬೇಕು. ಈ ಎಲ್ಲಾ ಮುಗಿದ ನಂತ್ರ ಕೆಲಸ ಮುಗಿದ ಮೇಲೆ ಬಿಲ್ ಹಣ ಬಿಡುಗಡೆಯಾಗಬೇಕು ಎಂದರು.
ಗಣಪತಿಯವರ ಡೆತ್ ನೋಟ್ ಇಟ್ಟುಕೊಂಡು ಜಾರ್ಜ್ ಅವರ ರಾಜೀನಾಮೆ ನೀಡಲಾಗಿತ್ತು. ಆ ಡೆತ್ ನೋಟ್ ಅನ್ನು ಅವರೇ ಸ್ವತಹ ಬರೆದಿದ್ದರು. ಆ ಡೆತ್ ನೋಟ್ ಅವರ ಬಾಡಿಯ ಹತ್ತಿರವೇ ಇತ್ತು. ಆದ್ರೇ ಸಂತೋಷ್ ಪಾಟೀಲ್ ಡೆತ್ ನೋಟ್ ಅನ್ನು ವಾಟ್ಸಾಪ್ ನಲ್ಲಿ ಕಳುಹಿಸಿದ್ದಾರೆ. ನನ್ನ ಸಾವಿಗೆ ಈಶ್ವರಪ್ಪನವರೇ ಕಾರಣ ಎಂಬುದಾಗಿ ಬರೆದಿದ್ದಾರೆ. ನಾನು ಎಲ್ಲೋ ಕುಳಿತು ಹೀಗೆ ಕಳಿಸಿದ್ರೇ ಯಾರಾದ್ರೂ ನಂಬುತ್ತಾರಾ ಎಂದು ಪ್ರಶ್ನಿಸಿದ್ದಾರೆ.