ಮೈಸೂರು, ಏ 13 (DaijiworldNews/DB): ವಿರೋಧ ಪಕ್ಷಗಳು ಕೇಳಿದಕ್ಕೆಲ್ಲಾ ರಾಜೀನಾಮೆ ಕೊಡಲು ಆಗುವುದಿಲ್ಲ. ಸಣ್ಣಪುಟ್ಟ ವಿಚಾರಕ್ಕೂ ರಾಜೀನಾಮೆ ಕೇಳುವುದು ಅವರಿಗೆ ರೂಢಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲು ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳು ರಾಜ್ಯಪಾಲರಲ್ಲ, ರಾಷ್ಟ್ರಪತಿಯವರನ್ನೇ ಭೇಟಿಯಾಗಲಿ. ಅವರಿಗೆ ರಾಜೀನಾಮೆ ಕೇಳುವುದು ಅಭ್ಯಾಸ ಆಗಿ ಹೋಗಿದೆ. ಆದರೆ ಅವರು ಹೇಳಿದಂತೆ ಮಾಡಲು ಆಗುವುದಿಲ್ಲ ಎಂದರು.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಘಟನೆ ನಡೆದು ಏಳು ತಿಂಗಳ ಬಳಿಕ ಜಾರ್ಜ್ ರಾಜೀನಾಮೆ ನೀಡಿದ್ದರು. ಆದರೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಘಟನೆ ನಡೆದ ತತ್ಕ್ಷಣವೇ ತನಿಖೆಗೆ ಆದೇಶ ನೀಡಲಾಗಿದೆ. ಈಶ್ವರಪ್ಪ ರಾಜೀನಾಮೆ ನೀಡುವ ಸ್ಥಿತಿ ಸದ್ಯ ಬಂದೊದಗಿಲ್ಲ. ತನಿಖೆ ನಡೆಯುತ್ತಿದೆ. ತನಿಖೆ ವೇಳೆ ಯಾರೇ ತಪ್ಪಿತಸ್ಥರೆಂದು ಕಂಡು ಬಂದರೂ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದರು.
ಮುಖ್ಯಮಂತ್ರಿಯವರು ರಾಜೀನಾಮೆ ಕೇಳಿದರೆ ಕೊಡುತ್ತೇನೆ ಎಂಬುದಾಗಿ ಈಶ್ವರಪ್ಪ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಶ್ವರಪ್ಪ ರಾಜೀನಾಮೆ ಪಡೆಯುವುದು, ಬಿಡುವುದು ಸಿಎಂಗೆ ಬಿಟ್ಟ ವಿಚಾರ. ಈ ಬಗ್ಗೆ ಸಿಎಂಗೆ ಏನಾದರೂ ಹೇಳಬೇಕಾದ ಅಗತ್ಯ ಬಂದಲ್ಲಿ ಖುದ್ದು ಅವರನ್ನು ಭೇಟಿಯಾಗಿ ಮಾತನಾಡಲಾಗುವುದು ಎಂದರು.