ಬೆಂಗಳೂರು, ಏ 13 (DaijiworldNews/MS): ’ಬಿಜೆಪಿಯವರು ಈಶ್ವರಪ್ಪರನ್ನು ಸಂಪುಟದಿಂದ ವಜಾ ಮಾಡದೆ ಹೋದರೆ ಕೊಲೆಗಡುಕ ಸಂಪುಟದ ನಾಯಕರಾಗಲಿದ್ದಾರೆ ’ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ಎಂದು ಲೇವಡಿ ಮಾಡಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ವರಿಷ್ಠರು ಈಗಲಾದರೂ ನೈತಿಕತೆಯಿಂದ ವರ್ತಿಸಲಿ. ಸಂತೋಷ್ ಆತ್ಮಹತ್ಯೆಯ ಆರೋಪಿ ಸಚಿವ ಈಶ್ವರಪ್ಪರ ವಿರುದ್ದ ಕ್ರಮಕ್ಕೆ ಬೊಮ್ಮಾಯಿಯವರಿಗೆ ಸೂಚಿಸಲಿ. ಇಂತಹ ಸಂಪುಟದಿಂದ ರಾಜ್ಯದ ಜನ ನೆಮ್ಮದಿಯಾಗಿರಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯ ಪ್ರಮುಖ ಆರೋಪಿ ಸಚಿವ ಈಶ್ವರಪ್ಪ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಸಂತೋಷ್ ಸಾವಿಗೂ ಮುನ್ನ ಕಳಿಸಿರುವ ವಾಟ್ಸ್ಅಪ್ ಸಂದೇಶದಲ್ಲೂ ನೇರವಾಗಿ ಈಶ್ವರಪ್ಪ ಹೆಸರಿದೆ. ಇದು open & shut ಕೇಸ್. ಈಶ್ವರಪ್ಪರನ್ನು ಬಂಧಿಸಲು ಪೊಲೀಸರ ತಡವೇಕೆ? ಪೊಲೀಸರಿಗೆ ಇನ್ನೆಷ್ಟು ಸಾಕ್ಷಿ ಬೇಕು? ಈಶ್ವರಪ್ಪರನ್ನು ರಕ್ಷಿಸಲು ಭಂಡತನಕ್ಕೆ ಇಳಿದಿರುವ ಬಿಜೆಪಿ ನಾಯಕರು ವಾಟ್ಸ್ಅಪ್ ಸಂದೇಶವನ್ನು ಡೆತ್ನೋಟ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬ ಅತಾರ್ಕಿಕ ವಾದ ಮಂಡಿಸುತ್ತಿದ್ದಾರೆ. ಬಿಜೆಪಿಯವರ ಪ್ರಕಾರ ಸಂತೋಷ್ ಫೇಸ್ಬುಕ್ ಲೈವ್ನಲ್ಲಿ ಬಂದು ನೇಣು ಹಾಕಿಕೊಳ್ಳಬೇಕಿತ್ತೆ? ಅಥವಾ ವಿಡಿಯೋ ಮಾಡಿ ಸಾಯಬೇಕಿತ್ತು ಎಂಬರ್ಥವೆ? ಎಂದು ಪ್ರಶ್ನಿಸಿದ್ದಾರೆ.
Indian Evidence Actನಲ್ಲಿ dying declarationಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ವ್ಯಕ್ತಿಯೊಬ್ಬ ಸಾವಿನ ಮುಂಚೆ ಬರೆದಿರುವ ಡೆತ್ ನೋಟ್ಗೂ ಇದೆ. ಡೆತ್ ನೋಟ್ ವಾಟ್ಸ್ಅಪ್ ನಲ್ಲಿದೆ ಎನ್ನುವುದು ಪಲಾಯನದ ದಾರಿ ಹುಡುಕುವ ವ್ಯರ್ಥ ಪ್ರಯತ್ನವಷ್ಟೆ. ಈಶ್ವರಪ್ಪನವರು ಎಸ್ಕೇಪ್ ರೂಟ್ ಹುಡುಕುವುದು ಬಿಟ್ಟು ನೆಲದ ಕಾನೂನಿಗೆ ತಲೆ ಬಾಗಲಿ ಎಂದು ಒತ್ತಾಯಿಸಿದ್ದಾರೆ.