ಬೆಂಗಳೂರು, ಏ 13 (DaijiworldNews/HR): ಪ್ರಿವೆನ್ಶನ್ ಆಫ್ ಕರಪ್ಶನ್ ಆಕ್ಟ್ ಸೆಕ್ಷನ್ 30 ಅಡಿಯಲ್ಲಿ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸಬೇಕು. ಕಾನೂನು ಎಲ್ಲರಿಗೂ ಒಂದೇಯಾಗಿದೆ. ಅದು ಸಿಎಂ ಆಗಿರಲಿ, ಸಚಿವರಾಗಿರಲಿ ಎಲ್ಲರಿಗೂ ಕಾನೂನು ಒಂದೇ. ಕಾನೂನಿನ ಮುಂದೆ ಈಶ್ವರಪ್ಪ ಯಾರ್ರೀ? ನಿಮಗೇನಾದರೂ ಮಾನ ಮರ್ಯಾದೆ ಇದ್ದರೆ ಕೂಡಲೇ ಈಶ್ವರಪ್ಪ ಅರೆಸ್ಟ್ ಮಾಡಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.
ಇಂದು ಸಚಿವ ಈಶ್ವರಪ್ಪ ರಾಜೀನಾಮೆ ಪಡೆಯುವಂತೆ ರಾಜ್ಯಪಾಲರನ್ನು ಭೇಟಿಮಾಡಿ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಇವತ್ತು ನಾನು ಹಾಗೂ ನಮ್ಮ ಅಧ್ಯಕ್ಷರು, ಮೇಲ್ಮನೆ ವಿಪಕ್ಷ ನಾಯಕ ಹರಿಪ್ರಸಾದ್ ಎಲ್ಲರೂ ಸೇರಿ ರಾಜ್ಯಪಾಲರಿಗೆ ಮನವಿ ಕೊಟ್ಟಿದ್ದೇವೆ. ಏನೇ ಮಾಡಿದರೂ 40% ಕಮಿಷನ್ ಇಲ್ಲದೇ ವರ್ಕ್ ಆರ್ಡರ್ ಕೊಡಲ್ಲ, ಬಿಲ್ ರಿಲೀಸ್ ಮಾಡಲ್ಲ ಅಂದಿದ್ದಾರೆ. ಹೀಗಾಗಿ ಸಂತೋಷ್ ಪಾಟೀಲ್ ಪಿಎಂ, ಕೇಂದ್ರ ಸಚಿವರು ಹಾಗೂ ಆರೆಸ್ಸೆಸ್ ನ ಬಿ.ಎಲ್ ಸಂತೋಷ್ ಭೇಟಿಯಾಗಿಯೂ ಮನವಿ ಮಾಡಿ ದೂರು ಕೊಟ್ಟಿದಾರೆ. ಕಂಟ್ರಾಕ್ಟರ್ ಅಸೋಸಿಯೇಷನ್ ನ ಕೆಂಪಣ್ಣ ಕೂಡ 40% ಗೌರ್ಮೆಂಟ್ ಅಂತ ಆಪಾದನೆ ಮಾಡಿದ್ರು ಎಂದರು.
ಇನ್ನು ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ 40% ಕಮಿಷನ್ ಇಲ್ಲದೇ ಯಾವುದೇ ಕೆಲಸ ಆಗ್ತಿಲ್ಲ. ನಾವು ಈ 40% ಕಮಿಷನ್ ವಿಚಾರ ಸದನದಲ್ಲಿ ಪ್ರಸ್ತಾಪ ಮಾಡಿದಾಗ ವಿಧಾನಸಭೆ ಇತಿಹಾಸದಲ್ಲಿ ಮೊದಲ ಬಾರಿಗೆ ಸುಮೋಟೋ ರಿಜೆಕ್ಟ್ ಮಾಡಿಬಿಟ್ರು, ಇಷ್ಟೆಲ್ಲ ಆದರೂ ಕೂಡ ಪ್ರಧಾನಿ, ಸಿಎಂ ಯಾರೂ ಸಹ ಏನೂ ಕ್ರಮ ಕೈಗೊಳ್ಳಲಿಲ್ಲ. ಕೊನೆಗೆ ಪಾಪ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.