ಮೈಸೂರು, ಏ 13 (DaijiworldNews/MS): ಮೈಸೂರು ಪ್ರವಾಸದಲ್ಲಿರುವಂತ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ, ಈಗ ಸಂತೋಷ್ ಪಾಟೀಲ್ ಆತ್ಮಹತ್ಯೆಯ ಬಳಿಕ, ರಾಜೀನಾಮೆಯ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇನ್ನೊಂದೆಡೆ ಮೊಬೈಲ್ ಕರೆಯೊಂದರ ಮೇಲೆ ತಮ್ಮ ಪ್ರವಾಸ ಮೊಟಕುಗೊಳಿಸಿರುವ ಸಚಿವ ಈಶ್ವರಪ್ಪ ಮೈಸೂರಿನಿಂದ ಬೆಂಗಳೂರಿನತ್ತ ದೌಡಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿಯ ವಿಭಾಗೀಯ ಮಟ್ಟದ ಸಭೆ ನಡೆಯುತ್ತಿರುವ ಹಿನ್ನಲೆಯಲ್ಲಿ ಬಿಜೆಪಿಯ ಹಲವು ನಾಯಕರ ಸಮೇತ ಈಶ್ವರಪ್ಪ ಅವರೂ ಕೂಡಾ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ನಲ್ಲಿದ್ದರು. ಈ ವೇಳೆ ಮೊಬೈಲ್ ಕರೆಯೊಂದು ಸಚಿವರಿಗೆ ಬಂದಿದ್ದು ಇದಾದ ಬಳಿಕ ದಿಢೀರನೆ ಕಾರಿನಲ್ಲಿ ಬೆಂಗಳೂರಿನತ್ತ ಹೊರಟಿದ್ದಾರೆ ಎಂದು ವರದಿಯಾಗಿದೆ.
ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ನೇರವಾಗಿ ಸಚಿವರ ವಿರುದ್ಧ ಎಫ್ಐಆರ್ ದಾಖಲಾಗಿರುವುದರಿಂದ ಹೈಕಮಾಂಡ್ ಸೂಚನೆಯ ಮೇರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂಬ ಮಾತು ಮಾತು ಬಿಜೆಪಿಯೊಳಗೆ ಹರಿದಾಡುತ್ತಿದೆ.