ರಾಮನಗರ, ಏ 12 (DaijiworldNews/DB): ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದ ಕೇಂದ್ರದ ಮಾಜಿ ಸಚಿವ ಸಿ. ಎಂ. ಇಬ್ರಾಹಿಂ ಅವರು ಏಪ್ರಿಲ್ 17ರ ಭಾನುವಾರದಂದು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಲಿದ್ದಾರೆ.
ರಾಮನಗರದಲ್ಲಿ ಪಕ್ಷದ ವರಿಷ್ಠ ಎಚ್. ಡಿ. ದೇವೇಗೌಡ ಅವರು ಈ ಕುರಿತು ಮಂಗಳವಾರ ಮಾಹಿತಿ ನೀಡಿ, ಪಕ್ಷ ಸೇರ್ಪಡೆಯೊಂದಿಗೆ ಸಿ.ಎಂ. ಇಬ್ರಾಹಿಂ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದರು.
ಹಾಲಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಎಚ್. ಕೆ. ಕುಮಾರಸ್ವಾಮಿ ಅವರಿಗೆ ಸಮಾನವಾದ ಹುದ್ದೆ ಸೃಷ್ಟಿ ಮಾಡಲಾಗಿದ್ದು, ಆ ಹುದ್ದೆಯನ್ನು ಸಿ.ಎಂ. ಇಬ್ರಾಹಿಂ ನಿಭಾಯಿಸಲಿದ್ದಾರೆ. ಇಬ್ಬರೂ ಒಟ್ಟಾಗಿ ಪಕ್ಷ ಮುನ್ನಡೆಸಲಿದ್ದಾರೆ.
ಈ ವೇಳೆ ಮಾತನಾಡಿದ ಸಿ. ಎಂ. ಇಬ್ರಾಹಿಂ, ದೇವೇಗೌಡರ ಪರ್ವ "1994ರಲ್ಲಿ ರಾಮನಗರದಿಂದ ಆರಂಭವಾಗಿತ್ತು. ಪ್ರಸ್ತುತ ಕುಮಾರಸ್ವಾಮಿ ಪರ್ವ ಕೂಡಾ ಇದೇ ಕ್ಷೇತ್ರದಿಂದ ಶುರುವಾಗುತ್ತಿರುವುದು ಸಂತಸದ ವಿಚಾರ ಎಂದರು.
ಜೆಡಿಎಸ್ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುವ ದಿನ ಖಂಡಿತವಾಗಿ ರಾಜ್ಯದಲ್ಲಿ ಬರಲಿದೆ. ಕಾಂಗ್ರೆಸ್ ಇಲ್ಲಿ ನೆಲಕಚ್ಚುವುದು ಖಚಿತ. ಮೇ ತಿಂಗಳಿನಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಜೆಡಿಎಸ್ನ ಅಗತ್ಯತೆ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದವರು ಇದೇ ವೇಳೆ ತಿಳಿಸಿದರು.