ಬೆಂಗಳೂರು, ಏ 10 DaijiworldNews/HR): ಬೆಂಗಳೂರಿನ ಜೆ.ಜೆ. ನಗರದಲ್ಲಿ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಚಂದ್ರು ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ಸೂಚಿಸಿದ್ದೇನೆ. ಶನಿವಾರ ಡಿಜಿ, ಐಜಿಪಿ ಮತ್ತು ಕಮಿಷನರ್ ಕರೆದು ಮಾತನಾಡಿದ್ದೇನೆ. ಇಂದು ನಗರ ಪೊಲೀಸ್ ಆಯುಕ್ತರು ಸಿಐಡಿಗೆ ಚಂದ್ರು ಹತ್ಯೆ ಕೇಸ್ ಹಸ್ತಾಂತರ ಮಾಡಲಿದ್ದಾರೆ ಎಂದರು.
ಏ.5ರಂದು ಜೆಜೆ ನಗರದಲ್ಲಿ ಚಂದ್ರು ಎಂಬ ಯುವಕನನ್ನು ಕೊಲೆ ಮಾಡಲಾಗಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ, ಉರ್ದು ಗೊತ್ತಿಲ್ಲದಕ್ಕೆ ಕೊಲೆ ನಡೆದಿತ್ತು ಎಂದು ಹೇಳಿದ್ದರು. ಇತ್ತ ಪೊಲೀಸ್ ಆಯುಕ್ತ ಕಮಲ್ ಪಂತ್ ಉರ್ದು ಗೊತ್ತಿಲ್ಲ ಎನ್ನುವ ಕಾರಣಕ್ಕೆ ನಡೆದ ಕೊಲೆಯಲ್ಲ ಎಂದಿದ್ದರು. ಇನ್ನು ಗೃಹ ಸಚಿವರ ಹೇಳಿಕೆ ಭಾರೀ ಕೋಲಾಹಲವನ್ನೇ ಸೃಷ್ಟಿಸಿತ್ತು.