ಹಾಸನ, ಏ 06 (DaijiworldNews/DB): ಬಿಜೆಪಿ ರೈತರನ್ನು ಬದುಕಿರುವಾಗಲೇ ಸಮಾಧಿ ಮಾಡಲು ಹೊರಟಿದೆ. ಮುಸ್ಲಿಮರಿಗೆ ವ್ಯಾಪಾರದಲ್ಲಿ ನಿರ್ಬಂಧ ವಿಧಿಸುವುದು ಅವರ ಚುನಾವಣಾ ಅಜೆಂಡವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಹಾಸನದಲ್ಲಿ ಬುಧವಾರ ಮಾತಾನಾಡಿದ ಅವರು, ರಾಜ್ಯದಲ್ಲಿ ಕುರಿ, ಕೋಳಿಗಳನ್ನು ರೈತರು ಸಾಕುವುದು. ನಿಗದಿಪಡಿಸಿದ ಸಮಯದಲ್ಲೇ ಅವುಗಳನ್ನು ಕಟಾವು ಮಾಡದಿದ್ದರೆ ರೈತರಿಗೆ ಅವುಗಳ ಮೇವಿನ ವೆಚ್ಚ ಹೆಚ್ಚಾಗಲಿದೆ. ಇದರಿಂದ ಆರ್ಥಿಕ ನಷ್ಟಕ್ಕೊಳಗಾಗಿ ರೈತರು ಸಂಕಷ್ಟ ಎದುರಿಸಬೇಕಾಗುತ್ತದೆ. ಆದರೆ ರೈತರ ಕ್ಷೇಮಕ್ಕಿಂತ ಚುನಾವಣಾ ಅಜೆಂಡಾವೇ ಮುಖ್ಯವಾಗಿರುವ ಬಿಜೆಪಿಯವರು ಹಲಾಲ್ ಕಟ್ ವಿಚಾರವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಆಪಾದಿಸಿದರು.
ಕೊರೊನಾ ಸಂದರ್ಭದಲ್ಲಿ ರೈತರಿಂದ ಅಲ್ಪಸಂಖ್ಯಾತರೇ ಮಾವು ಖರೀದಿ ಮಾಡಿದ್ದರು. ಆದರೆ ಈಗ ಅವರಿಂದ ವ್ಯಾಪಾರ ಮಾಡುವುದು ಬೇಡ ಎಂದರೆ ರೈತ ಸಮುದಾಯಕ್ಕೇ ನಷ್ಟ ಹೆಚ್ಚಾಗಲಿದೆ. ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಸಂಕಷ್ಟದ ಮೇಲೆ ಸಂಕಷ್ಟ ನೀಡಿ ಬದುಕಿರುವಾಗಲೇ ಸಮಾಧಿ ಮಾಡುತ್ತಿದ್ದಾರೆ ಎಂದರು.
ಸಿ.ಟಿ. ರವಿ ಅವರಿಗೆ ಉತ್ತರ ಕೊಡುವಷ್ಟು ದೊಡ್ಡವನು ನಾನಲ್ಲ. ಅವರು ಮೇಧಾವಿಗಳು ಎಂದು ಪ್ರಶ್ನೆಯೊಂದಕ್ಕೆ ಇದೇ ವೇಳೆ ಉತ್ತರಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳೂ ಅಧಿಕಾರಕ್ಕೆ ಬಂದಂತೆ ಎಂದವರು ಇದೇ ವೇಳೆ ತಿಳಿಸಿದರು.
ಚುನಾವಣೆ ಬಳಿಕ ಮೈತ್ರಿ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಕಾಲ ಮೇಲೆ ನಿಲ್ಲುವ ಶಕ್ತಿ ನಮಗಿದೆ. ಸ್ವಂತ ಬಲದಲ್ಲೇ ಸರ್ಕಾರ ರಚಿಸುತ್ತೇವೆ. ಜನಾಶಯವೂ ನಮ್ಮ ಕಡೆಗಿದೆ ಎಂದರು.
ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಇಲ್ಲ. ಕಾಂಗ್ರೆಸ್ ಬಣದಲ್ಲಿ ನಾನಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸುಪ್ರೀಂಕೋರ್ಟ್ ನೀಡಿರುವ ಕಾನೂನಿನಂತೆ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು ಎಂದರು.