ಬೆಳಗಾವಿ, ಏ 02 (DaijiworldNews/DB): ಧಾರ್ಮಿಕ ದಿನವಾಗಿ ಯುಗಾದಿ ಹಬ್ಬವನ್ನು ಘೋಷಿಸಿದ ಬಳಿಕ ಪ್ರಥಮ ಧಾರ್ಮಿಕ ದಿನದ ರಾಜ್ಯ ಮಟ್ಟದ ಕಾರ್ಯಕ್ರಮ ನಿಪ್ಪಾಣಿಯ ಶ್ರೀ ವಿರೂಪಾಕ್ಷ ಲಿಂಗ ಸಮಾಧಿ ಮಠದಲ್ಲಿ ಶನಿವಾರ ಜರಗಿತು.
ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ದಂಪತಿ ಪೂಜೆ ನೆರವೇರಿಸಿದರು. ಸಾಂಪ್ರದಾಯಿಕ ಪೂಜೆ, ಗೋ ಪೂಜೆ, ಲಕ್ಷ್ಮೀ ಪೂಜೆ, ನಡೆಯಿತು. ನೇಗಿಲು ಹಿಡಿದು ಬಿತ್ತನೆ ಮಾಡುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಶಶಿಕಲಾ ಜೊಲ್ಲೆ ಮಾತನಾಡಿ, ಸರ್ಕಾರದ ವತಿಯಿಂದ ಯುಗಾದಿ ಮುಂದೆ ಪ್ರತಿ ವರ್ಷ ಧಾರ್ಮಿಕ ಹಬ್ಬವಾಗಿ ಆಚರಿಸಲ್ಪಡುತ್ತದೆ. ಈ ದಿನದಂದು ದೇಶೀಯ ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಸುವ ಕೆಲಸ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಳಗಳಲ್ಲಿ ನಡೆಯಬೇಕು ಎಂದರು.
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡರ ಮತ್ತಿತರರು ಉಪಸ್ಥಿತರಿದ್ದರು.