ಮಂಡ್ಯ, ಮಾ 27 (DaijiworldNews/DB): ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಬಹಿರಂಗ ಚರ್ಚೆಗೆ ಬರುವಂತೆ ಮಾಜಿ ಸಚಿವ ಹಾಗೂ ಮದ್ದೂರು ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ ಆಹ್ವಾನಿಸಿದ್ದಾರೆ.
ಶಾಸಕರ ಕೆಲಸವನ್ನೂ ಮಂಡ್ಯದಲ್ಲಿ ನಾನೇ ಮಾಡುತ್ತಿದ್ದೇನೆ. ಅಂತಹ ಅಗತ್ಯ ಬಂದೊದಗಿದೆ ಎಂದು ಸಂಸದೆ ಸುಮಲತಾ ಈ ಹಿಂದೆ ಹೇಳಿಕೆ ನೀಡಿದ್ದರು. ಸಂಸದೆಯ ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಡಿ.ಸಿ. ತಮ್ಮಣ್ಣ, ಸುಮಲತಾ ಈ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. ಶಾಸಕರ ಯಾವ ಕೆಲಸವನ್ನು ಅವರು ಮಾಡಿದ್ದಾರೆ ಎನ್ನುವುದನ್ನು ಬಹಿರಂಗವಾಗಿ ಹೇಳಲಿ ಎಂದಿದ್ದಾರೆ.
ನಮ್ಮ ಕೆಲಸಕ್ಕೆ ಇನ್ನೊಬ್ಬರ ಪ್ರಮಾಣಪತ್ರ ಅಗತ್ಯವಿಲ್ಲ. ಕ್ಷೇತ್ರದ ಜನ ಪ್ರಮಾಣಪತ್ರ ನೀಡುತ್ತಾರೆ. ಅದು ಮಾತ್ರ ನಮಗೆ ಮುಖ್ಯ ಎಂದು ಶಾಸಕ ತಮ್ಮಣ್ಣ ಇದೇ ವೇಳೆ ಸುಮಲತಾ ಅವರಿಗೆ ತಿರುಗೇಟು ನೀಡಿದ್ದಾರೆ. ಸಮಸ್ಯೆ ಇದ್ದರೆ ಜನ ಹೇಳುತ್ತಾರೆ. ಅವರು ಹೇಳದೇ ಇದ್ದರೆ ಏನು ಸಮಸ್ಯೆ ಎಂಬುದು ತಿಳಿಯುವುದಿಲ್ಲ. ಜನ ಹೇಳಿದಾಗ ಆ ಸಮಸ್ಯೆ ನಿವಾರಿಸಲು ಒತ್ತು ನೀಡಲಾಗುತ್ತದೆ. ಅಂತಹ ಸಮಸ್ಯೆ ಅವರ ಬಳಿ ಹೇಳಿದ್ದರೆ ಅವರೂ ಬಗೆಹರಿಸಲಿ ಎಂದರು.