ಲಕ್ನೋ, ಮಾ 26 (DaijiworldNews/DB): ಉತ್ತರ ಪ್ರದೇಶದಲ್ಲಿ ಶುಕ್ರವಾರವಷ್ಟೇ ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಯೋಗಿ ಆದಿತ್ಯನಾಥ್ ಅವರ ಸಂಪುಟದಲ್ಲಿ ಜಾತೀವಾರು ಮತ್ತು ಪ್ರದೇಶವಾರು ಅವಕಾಶವನ್ನು ಕಲ್ಪಿಸಲಾಗಿದೆ. 9 ಮಂದಿ ದಲಿತರು, ಇಬ್ಬರು ಮುಸ್ಲಿಮರು ಹಾಗೂ 20 ಮಂದಿ ಹಿಂದುಳಿದ ವರ್ಗದವರಿಗೆ ಸಂಪುಟದಲ್ಲಿ ಸ್ಥಾನಮಾನ ನೀಡಲಾಗಿದೆ.
ಯೋಗಿ ಸಂಪುಟದಲ್ಲಿ ಒಟ್ಟು 52 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಪೈಕಿ 18 ಮಂದಿಗೆ ಕ್ಯಾಬಿನೆಟ್ ಸ್ಥಾನ, 14 ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು ಮತ್ತು 20 ಕಿರಿಯ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 52 ಮಂದಿಯಲ್ಲಿ ಮುಖ್ಯಮಂತ್ರಿ ಸಹಿತ 21 ಮಂದಿ ಮೇಲ್ವರ್ಗದಿಂದ ಬಂದವರು. ಉಳಿದವರಲ್ಲಿ 9 ಮಂದಿ ದಲಿತ ಸಮುದಾಯದ ಹಾಗೂ 20 ಮಂದಿ ಹಿಂದುಳಿದ ವರ್ಗದ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇಬ್ಬರು ಸಚಿವರನ್ನು ಮುಸ್ಲಿಂ ಸಮುದಾಯದಿಂದ ಆಯ್ಕೆ ಮಾಡಲಾಗಿದೆ.
ಕಳೆದ ಮೂರೂವರೆ ದಶಕಗಳ ಬಳಿಕ ಉತ್ತರ ಪ್ರದೇಶದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಮೊದಲ ಮುಖ್ಯಮಂತ್ರಿ ಎಂಬ ಹಿರಿಮೆಗೆ ಯೋಗಿ ಆದಿತ್ಯನಾಥ್ ಪಾತ್ರರಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಲಕ್ಷಾಂತರ ಮತಗಳ ಅಂತರದಿಂದ ಜಯ ಸಾಧಿಸಿ ಅಧಿಕಾರದ ಗದ್ದುಗೆಯನ್ನು ಭದ್ರಪಡಿಸಿಕೊಂಡಿದ್ದಾರೆ. ಇಲ್ಲಿ ಬ್ರಾಹ್ಮಣರು ಮತ್ತು ಠಾಕೂರ್ ಗಳು ಬಿಜೆಪಿಗೆ ಪ್ರಮುಖ ಮತದಾರರಾಗಿದ್ದರು. ಆದರೆ 2024ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ದಲಿತ ಸಮುದಾಯವನ್ನು ಓಲೈಸುವ ನಿಟ್ಟಿನಲ್ಲಿಯೂ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿ ಈ ಬಾರಿ ದಲಿತರು ಮತ್ತು ಹಿಂದುಳಿದ ವರ್ಗಗಳಿಗೂ ಯೋಗಿ ಸಂಪುಟದಲ್ಲಿ ಆದ್ಯತೆ ನೀಡಲಾಗಿದೆ.