ಬೆಂಗಳೂರು, ಮಾ 25 (DaijiworldNews/MS): ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳ ಅಪೌಷ್ಟಿಕತೆ ನಿವಾರಣೆಗಾಗಿ ಮಧ್ಯಾಹ್ನ ಪೌಷ್ಟಿಕ ಬಿಸಿಯೂಟ ನೀಡುವ ಮಾತೃಪೂರ್ಣ ಯೋಜನೆ ಹಲವು ಸಮಸ್ಯೆಗಳಿಂದ ಗೊಂದಲದ ಗೂಡಾಗಿ ಅವೈಜ್ಞಾನಿಕ ನಿಯಮವನ್ನು ಸರಿಪಡಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದ್ದಾರೆ.
ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅವರ ಪ್ರಶ್ನೆಗೆ ಸಚಿವ ಆಚಾರ್ ಹಾಲಪ್ಪ ಅವರು ಉತ್ತರಿಸುತ್ತಿದ್ದಾಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ಗರ್ಭಿಣಿಯರು, ಬಾಣಂತಿಯರು ಅಂಗನವಾಡಿಗೆ ಹೋಗಿ ಊಟ ಮಾಡಿಕೊಂಡು ಬರಬೇಕು ಎಂದರೆ ಹೇಗೆ? ಅದು ಸಾಧ್ಯ ಆಗುತ್ತಾ ಇಲ್ಲವೋ ಎಂಬುದು ಸಾಮಾನ್ಯ ಜ್ಞಾನಕ್ಕೂ ಬರುವುದಿಲ್ಲವೇ? ಕಾಮನ್ ಸೆನ್ಸ್ ಇರುವವರು 2017 ರಲ್ಲಿ ಇಂತಹ ಆದೇಶ ಮಾಡುತ್ತಿರಲಿಲ್ಲ ಎಂದು ಸಿಡಿಮಿಡಿಕೊಂಡರು.
ಇದಕ್ಕೂ ಮುಂಚೆ ಶೃಂಗೇರಿ ಶಾಸಕ ರಾಜೇಗೌಡ "ಸರ್ಕಾರದ ಈ ನಿಯಮದಿಂದ ಮಲೆನಾಡು ಭಾಗದಲ್ಲಿ ಗರ್ಭಿಣಿಯರು, ಬಾಣಂತಿಯರು ಎರಡು ಮೂರು ಕಿ.ಮೀ ಮೀಟರ್ ಊಟಕ್ಕಾಗಿ ಹೋಗಬೇಕಾಗುತ್ತದೆ. ಕಚ್ಚಾ ರಸ್ತೆಯಲ್ಲಿ ವಾಹನದಲ್ಲಿ ಗರ್ಭಿಣಿಯರು ನಿತ್ಯ ಊಟಕ್ಕಾಗಿ ಅಂಗನವಾಡಿ ಕೇಂದ್ರಕ್ಕೆ ಬರಲು ಸಾಧ್ಯನಾ?" ಎಂದು ಪ್ರಶ್ನಿಸಿದ್ದರು.
"ಬಿಸಿಯೂಟವನ್ನು ಮನೆಗೆ ಕೊಟ್ಟಿದ್ದೇ ಆದರೆ ಗಂಡ, ಅತ್ತೆ, ಮಾವ ಊಟ ಮಾಡುತ್ತಾರೆ ಎಂಬುದು ಅಧಿಕಾರಿಗಳ ಮನಸ್ಸಿನಲ್ಲಿರಬೇಕು. ಆಯಾ ಕಾಲಕ್ಕೆ ತಕ್ಕಂತೆ ಅಅಧಿಕಾರಿಗಳು ವರದಿ ಕೊಡುತ್ತಾರೆ. 2017ರಲ್ಲಿ ಈ ನಿಯಮ ಜಾರಿ ಮಾಡಲಾಗಿದೆ. ಇದು ಅವೈಜ್ಞಾನಿಕವಾಗಿದ್ದು ಸರಿಪಡಿಸಿ, ಕೇಂದ್ರದ ಮಾರ್ಗಸೂಚಿ ಏನಾದರೂ ಇದ್ದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸರಿಪಡಿಸಿ ಎಂದು ಸ್ಪೀಕರು ಕಾಗೇರಿ ಸೂಚಿಸಿದರು.
ಶಾಸಕರಾದ ರಮೇಶ್ಕುಮಾರ್, ಅಂಜಲಿ ಲಿಂಬಾಳ್ಕರ್, ರೂಪಕಲಾ ಅವರು, ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡುವ ಪೌಷ್ಟಿಕ ಆಹಾರದ ನ್ಯೂನತೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿದರು.