ನವದೆಹಲಿ, ಮಾ 22 (DaijiworldNews/DB): ಕಾಶ್ಮೀರ್ ಫೈಲ್ಸ್ ಚಿತ್ರದ ಗಳಿಕೆಯನ್ನು ಕಾಶ್ಮೀರಿ ಪಂಡಿತರ ಉನ್ನತಿಗಾಗಿ ಬಳಸಿಕೊಳ್ಳಬೇಕು ಎಂಬುದಾಗಿ ಸಲಹೆ ನೀಡಿದ ಐಎಎಸ್ ಅಧಿಕಾರಿಯೋರ್ವರಿಗೆ ಚಿತ್ರ ನಿರ್ದೇಶಕರು ಬೋಫಾಲ್ ಗೆ ಬರುತ್ತಿದ್ದು, ಸಹಾಯ ಮಾಡುವ ಬಗ್ಗೆ ಮತ್ತು ಐಎಎಸ್ ಅಧಿಕಾರಿಯಾದ ನಿಮ್ಮ ಸಹಾಯ ಪಡೆಯುವ ಬಗ್ಗೆಯೂ ಚರ್ಚಿಸೋಣ ಎಂದು ಪ್ರತಿಕ್ರಿಯಿಸಿದ್ದಾರೆ.
ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ದೇಶಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಈಗಾಗಲೇ ಹಲವಾರು ಮಂದಿ ಚಿತ್ರ ವೀಕ್ಷಣೆ ಮಾಡಿದ್ದಾರೆ. ಸದ್ಯ ಚಿತ್ರದ ಗಳಿಕೆ 150 ಕೋಟಿ ರೂ. ದಾಟಿ, ಗಳಿಕೆಯಲ್ಲೂ ದಾಖಲೆ ಬರೆದಿದೆ. ಹೀಗಾಗಿ ಕೆಲವರು ಈ ಹಣವನ್ನು ಬಡವರಿಗೆ, ಅಗತ್ಯವುಳ್ಳವರಿಗೆ ದಾನ ಮಾಡುವಂತೆ ನಿರ್ದೇಶಕರಿಗೆ ಸಲಹೆ ನೀಡುತ್ತಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಐಎಎಸ್ ಅಧಿಕಾರಿಯಾಗಿರುವ ನಿಯಾಝ್ ಖಾನ್ ಅವರು ಟ್ವೀಟ್ ಮಾಡಿ, ನಿರ್ಮಾಪಕರು ಈ ಆದಾಯವನ್ನು ಕಾಶ್ಮೀರಿ ಪಂಡಿತರ ಮನೆ ನಿರ್ಮಾಣ, ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸಬೇಕು ಎಂದು ಹೇಳಿದ್ದಾರೆ. ಇದಕ್ಕೆ ಟ್ವೀಟರ್ ಮುಖಾಂತರವೇ ಪ್ರತಿಕ್ರಿಯಿಸಿರುವ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ, ನಾನು ಭೋಪಾಲ್ ಗೆ ಬರುತ್ತಿದ್ದೇನೆ. ನಾವಿಬ್ಬರೂ ಅಲ್ಲಿ ಭೇಟಿಯಾಗಿ ಸಹಾಯ ಮಾಡುವ ಬಗ್ಗೆ ಚರ್ಚಿಸೋಣ. ಲೇಖಕರಾದ ನಿಮ್ಮ ಗೌರವಧನ ಮತ್ತು ಐಎಎಸ್ ಅಧಿಕಾರಿಯಾಗಿ ನಿಮ್ಮ ಸಹಾಯ ಪಡೆಯುವಿಕೆ ಬಗ್ಗೆಯೂ ಚರ್ಚಿಸೋಣ ಎಂದು ತಿಳಿಸಿದ್ದಾರೆ.