ನವದೆಹಲಿ, ಮಾ 22 (DaijiworldNews/MS): ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರು ಮಂಗಳವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಇಂಧನ ಬೆಲೆ ಏರಿಕೆಯ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ನಾಲ್ಕು ತಿಂಗಳುಗಳಿಂದ ಸ್ಥಿರವಾಗಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡಿದೆ. ಇವರನ್ನು (ಬಿಜೆಪಿ) ಯಾರು ಅಧಿಕಾರಕ್ಕೆ ತಂದರೋ ಗೊತ್ತಿಲ್ಲ ಎಂದು ಜಯಾ ಬಚ್ಚನ್ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಲೆ ಏರಿಕೆಯನ್ನು ಐದು ರಾಜ್ಯಗಳ ಚುನಾವಣೆಗಳಿಗೆ ಸಂಬಂಧ ಕಲ್ಪಿಸಿ ಮಾತನಾಡಿದ ಅವರು , " ಮತದಾರರೇ ಎಚ್ಚರದಿಂದಿರಿ, ಚುನಾವಣೆಯ ನಂತರ ಬೆಲೆ ಹೆಚ್ಚಾಗಲಿದೆ ಹೀಗೆಂದು ಅಖಿಲೇಶ್ ಯಾದವ್ ಅವರು ತಮ್ಮ ಪ್ರಚಾರದಲ್ಲಿ ಪದೇ ಪದೇ ಹೇಳುತ್ತಿದ್ದರು ಸರ್ಕಾರವು ಹೀಗೆಯೇ ಮಾಡುತ್ತಿದೆ" ಎಂದು ಹೇಳಿದ್ದಾರೆ.
ಫೆಬ್ರವರಿ 26 ರಂದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಉತ್ತರ ಪ್ರದೇಶದಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ರಾಜ್ಯ ಚುನಾವಣೆಗಳು ಮುಗಿದ ನಂತರ ಕೇಂದ್ರವು ಇಂಧನ ಬೆಲೆಯನ್ನು ಹೆಚ್ಚಿಸಲಿದೆ ಎಂದು ಹೇಳಿದ್ದರು. ರೈತರೂ ಟ್ರ್ಯಾಕ್ಟರ್ ಓಡಿಸಲು ಸಾಧ್ಯವಾಗುತ್ತಿಲ್ಲ, ಇದನ್ನು ಗಮನದಲ್ಲಿಟ್ಟುಕೊಳ್ಳಿ, ಚುನಾವಣೆ ಮುಗಿದ ತಕ್ಷಣ ಬಿಜೆಪಿಯವರು ಪೆಟ್ರೋಲ್ ಬೆಲೆ ₹ 200ಕ್ಕೆ ಏರಿಸುತ್ತಾರೆ ಎಂದು ಪತ್ರಿಕೆಗಳೂ ಬರೆಯಲಾರಂಭಿಸಿವೆ ಎಂದಿದ್ದರು.