ಕೋಲ್ಕತ್ತ, ಮಾ 22 (DaijiworldNews/DB): ಟಿಎಂಸಿ ಮುಖಂಡರೊಬ್ಬರ ಹತ್ಯೆಗೆ ಪ್ರತೀಕಾರವಾಗಿ ಅವರ ಬೆಂಬಲಿಗರ ಗುಂಪು ವಿರೋಧಿ ಗುಂಪಿನವರ ಮನೆಗಳಿಗೆ ಬೆಂಕಿ ಹಚ್ಚಿ ಸುಮಾರು 10 ಮಂದಿಯ ಸಾವಿಗೆ ಕಾರಣರಾದ ಘಟನೆ ಕೋಲ್ಕತ್ತದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಪಶ್ಚಿಮ ಬಂಗಾಳದ ಬಿರ್ಭುಮ್ನ ರಾಮಪುರಹಾಟ್ನ ಬಗುಟಿ ಗ್ರಾಮ ಪಂಚಾಯತ್ ಮುಖಂಡ ಭಾದು ಶೇಖ್ ಅವರ ಮೇಲೆ ಸೋಮವಾರ ರಾತ್ರಿ ಬಾಂಬ್ ದಾಳಿ ನಡೆದಿತ್ತು. ದಾಳಿ ವೇಳೆ ಅವರು ಅಂಗಡಿಯೊಂದರಲ್ಲಿ ಇದ್ದರು. ತತ್ ಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ದಾರಿ ಮಧ್ಯೆಯೇ ಮೃತಪಟ್ಟಿದ್ದರು.
ಮುಖಂಡ ಮೃತಪಟ್ಟಿರುವ ಸುದ್ದಿ ತಿಳಿದು ರೊಚ್ಚಿಗೆದ್ದ ಅವರ ಬೆಂಬಲಿಗರ ಗುಂಪೊಂದು ಆ ಗ್ರಾಮದಲ್ಲಿರುವ ವಿರೋಧಿ ಗುಂಪಿನ ಕೆಲವರ ಮನೆಗಳ ಮೇಲೆ ದಾಳಿ ನಡೆಸಿ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಘಟನೆಯಿಂದಾಗಿ ಸುಮಾರು 10 ಮಂದಿ ಸಜೀವ ದಹನವಾಗಿದ್ದಾರೆ ಎಂದು ಅಂದಾಜಿಸಲಾಗಿದೆ.
ಸೋಮವಾರ ರಾತ್ರಿಯೇ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಸುಮಾರು 12 ಮನೆಗಳು ಸುಟ್ಟು ಕರಕಲಾಗಿವೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.