ಬೆಂಗಳೂರು, ಮಾ 22 (DaijiworldNews/DB): ಕೋರ್ಟ್ ಆದೇಶವಿದ್ದರೂ ಕಾವೇರಿ ನೀರು ಹಂಚಿಕೆ ವಿಚಾರವು ತಮಿಳುನಾಡಿಗೆ ರಾಜಕೀಯ ದಾಳವಾಗಿದೆ. ಅವರು ಸ್ವಾತಂತ್ರ್ಯ ದೊರೆತಾಗಿನಿಂದ ಕಾವೇರಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಷಾದ ವ್ಯಕ್ತಪಡಿಸಿದರು.
ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಂಗಳವಾರ ಮಾತನಾಡಿದ ಅವರು, ಕಾವೇರಿ ಜಲವಿವಾದ ನ್ಯಾಯಮಂಡಳಿ ತೀರ್ಪು ನೀಡಿ ಕಾವೇರಿ ನೀರಿನ ಹಂಚಿಕೆಯಾಗಿದೆ. ನೀರು ಹಂಚಿಕೆ ಮಾಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ ಅಸ್ತಿತ್ವದಲ್ಲಿದೆ. ಆದರೆ ತಮಿಳುನಾಡು ಸ್ವಾತಂತ್ರ್ಯ ಸಿಕ್ಕಿದಾಗಿನಿಂದ ಇದರ ಬಗ್ಗೆ ತೆಗೆಯುತ್ತಿರುವ ಕ್ಯಾತೆಯನ್ನು ಇನ್ನೂ ನಿಲ್ಲಿಸಿಲ್ಲ ಎಂದರು.
ಕಾವೇರಿ ಹುಟ್ಟಿರುವುದು ಕರ್ನಾಟಕದಲ್ಲಿ. ಇಲ್ಲಿ ಬಿದ್ದ ಮಳೆ ನೀರಿನ ಮೇಲೆ ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆ ರೂಪಿಸಲಾಗಿದೆ. ಇದೆಲ್ಲಾ ತಮಿಳುನಾಡಿಗೂ ಗೊತ್ತು. ಆದಾಗ್ಯೂ ರಾಜಕೀಯ ಕಾರಣದಿಂದ ಆ ರಾಜ್ಯವು ವೃಥಾ ತಕರಾರು ಮಾಡುತ್ತಿದೆ ಎಂದು ಬೊಮ್ಮಾಯಿ ಆಪಾದಿಸಿದರು.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಕರ್ನಾಟಕದ ಪರವಾಗಿ ಆದೇಶ ನೀಡಿದೆ. ಈ ಎಲ್ಲಾ ಬೆಳವಣಿಗೆಗಳಿದ್ದರೂ, ಇದೀಗ ಮೇಕೆದಾಟು ಯೋಜನೆಗೆ ಕೇಂದ್ರ ಅನುಮತಿ ನೀಡದಿರಲು ತಮಿಳುನಾಡಿನ ಸರ್ವಪಕ್ಷಗಳು ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡಿವೆ. ಆದರೆ, ಇದು ರಾಜಕೀಯ ತಂತ್ರವಷ್ಟೇ ಹೊರತು ಇದಕ್ಕೆ ಕಾನೂನಿನ ಮಾನ್ಯತೆ ಇಲ್ಲ. ಯೋಜನೆ ಸಂಬಂಧ ಡಿಪಿಆರ್ ಪಡೆದು ಪರಿಸರ ಮತ್ತು ಅರಣ್ಯ ಇಲಾಖೆಯಯ ಅನುಮತಿಯೊಂದಿಗೆ ಯೋಜನೆ ಅನುಷ್ಠಾನಗೊಳ್ಳುವ ಸಂಬಂಧ ಸರ್ಕಾರ ಕ್ರಮ ವಹಿಸಲಿದೆ ಎಂದು ಬೊಮ್ಮಾಯಿ ತಿಳಿಸಿದರು.