ಮೈಸೂರು, ಮಾ 20 (DaijiworldNews/HR): ನಾವು ಸಹ ಹಿಂದೂಗಳೇ, ಇಡೀ ದೇಶದ ಜನತೆಗೆ ದೂರದರ್ಶನದ ಮೂಲಕ ಭಗವದ್ಗೀತೆ ತಲುಪಿಸಿದ್ದು ಕಾಂಗ್ರೆಸ್ ಎಂದು ಕರ್ನಾಟಕದ ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ವಿಚಾರವಾಗಿ ಬಿಜೆಪಿ ನಾಯಕರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಾಜೀವ್ ಗಾಂಧಿ ರಾಮಾಯಣ, ಮಹಾಭಾರತವನ್ನು ದೇಶದ ಜನತೆ ತೋರಿಸಿದ್ದಾರೆ. ದೂರದರ್ಶನದ ಮೂಲಕ ಜನರಿಗೆ ಭಗವದ್ಗೀತೆ ತಲುಪುವಂತೆ ಮಾಡಿದರು. ನಾವು ಕೂಡ ಹಿಂದೂಗಳೇ, ಭಗವದ್ಗೀತೆ ಶಿಕ್ಷಣದಲ್ಲಿ ಅಷ್ಟೇ ಅಲ್ಲ, ಇಡೀ ದೇಶದ ಜನತೆಗೆ ತಲುಪುವಂತೆ ಮಾಡಿದ್ದು ಕಾಂಗ್ರೆಸ್ ಎಂದರು.
ಇನ್ನು ಮುಂದೊಂದು ದಿನ ಕೇಸರಿ ಧ್ವಜವೇ ರಾಷ್ಟ್ರಧ್ವಜವಾಗಲಿದೆ ಎಂಬ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಭಾಕರ ಭಟ್ ಬಿಜೆಪಿಯಲ್ಲಿ ಯಾರು? ಏನು ಅಂತ ಗೊತ್ತಿಲ್ಲ. ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.