ಬೆಂಗಳೂರು, ಮಾ 20 (DaijiworldNews/DB): ಮುಂಬರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಕ್ರಮವಾಗಿ ತನಗೆ ಮತ್ತು ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಮತ ನೀಡಬೇಕೆಂದು ಬಿಜೆಪಿ ಸಂಸದ ಪಿ. ಸಿ. ಮೋಹನ್ ಪರೋಕ್ಷವಾಗಿ ಹೇಳಿದ ಪ್ರಸಂಗ ಚಾಮರಾಜಪೇಟೆಯಲ್ಲಿ ನಡೆದಿದೆ.
ಅಖಿಲ ಕರ್ನಾಟಕ ಮಕ್ಕಳ ಕೂಟದಲ್ಲಿ ಭಾನುವಾರ ನಡೆದ ಚಾಮರಾಜಪೇಟೆ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 13 ವರ್ಷಗಳಿಂದ ನನ್ನನ್ನು ಆಯ್ಕೆ ಮಾಡಿದ್ದೀರಿ. ಇದಕ್ಕಾಗಿ ನಾನು ಅಭಾರಿಯಾಗಿದ್ದೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನನಗೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಜಮೀರ್ ಅಹ್ಮದ್ ಅವರಿಗೆ ಮತ ನೀಡುವಂತೆ ಪರೋಕ್ಷವಾಗಿ ಮನವಿ ಮಾಡಿಕೊಂಡರು.
ಚಾಮರಾಜಪೇಟೆಗೆ ಚಾಮರಾಜ ಒಡೆಯರ್ ಅವರಿಂದಲೇ ಈ ಹೆಸರು ಬಂದಿದೆ. ಆದರೆ ಇಲ್ಲಿಗೆ ಹೆಚ್ಚಿನ ಕೊಡುಗೆ ನೀಡಿದ ಅವರ ಪುತ್ಥಳಿ ಇಲ್ಲಿಲ್ಲ. ಕೋಟೆ ಶಾಲೆ ಮುಂಭಾಗದಲ್ಲಿ ಒಡೆಯರ್ ಪುತ್ಥಳಿ ನಿರ್ಮಾಣಕ್ಕೆ ಅವಶ್ಯವಾಗಿ ಗಮನ ಹರಿಸಲಾಗುವುದು ಎಂದವರು ಇದೇ ವೇಳೆ ತಿಳಿಸಿದರು.