ಚಾಮರಾಜನಗರ, ಮಾ 18 (DaijiworldNews/DB): ಎಲ್ಲ ಮುಸಲ್ಮಾನರೂ ಕೆಟ್ಟವರಲ್ಲ, ಎಲ್ಲ ಹಿಂದೂಗಳೂ ಒಳ್ಳೆಯವರಲ್ಲ. ಒಳ್ಳೆಯವರು, ಕೆಟ್ಟವರು ಎಲ್ಲಾ ಧರ್ಮಗಳಲ್ಲಿಯೂ ಇದ್ದಾರೆ ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಕುರಿತು ಕೊಳ್ಳೇಗಾಲದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಚ್ಚಿ ಹೋದ ಇತಿಹಾಸವನ್ನು ಜನರಿಗೆ ತಿಳಿಸಿಕೊಡಬೇಕು. ಆಗ ಆ ಘಟನೆಯ ಸತ್ಯಾಸತ್ಯತೆ ಜನರಿಗೆ ತಿಳಿಯುತ್ತದೆ. ಮುಂದಿನ ದಿನಗಳಲ್ಲಿ ಅಂತಹ ಘಟನೆಗಳು ಮರು ಕಳಿಸಬಾರದು ಎಂಬ ದೃಷ್ಟಿಯಿಂದ ಈ ಚಿತ್ರ ತಯಾರಾಗಿದೆ ಎಂದರು.
ವಂಶ ರಾಜಕಾರಣ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ಪರಿಕಲ್ಪನೆ ತುಂಬಾ ಉತ್ತಮವಾಗಿದೆ. ನನ್ನ ಮಗನಿಗೆ ಅದೃಷ್ಟ ಇದ್ದಲ್ಲಿ ಶಾಸಕನಾಗುತ್ತಾನೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.
ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರ್ಪಡೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಠ್ಯ ಪುಸ್ತಕ ರಚನೆಗೆ ಸಮಿತಿ ಮಾಡಲಾಗುತ್ತದೆ. ಯಾವುದು ಬೇಕು, ಯಾವುದು ಬೇಡ ಎಂಬುವುದರ ಬಗ್ಗೆ ಸಮಿತಿಯವರು ತೀರ್ಮಾನ ಮಾಡುತ್ತಾರೆ. ಮುಂದಿನ ಪೀಳಿಗೆಗೆ ಏನು ತಿಳಿಸಬೇಕು ಎಂಬುದರ ಬಗ್ಗೆ ನಿರ್ಧರಿಸುವವರು ಅವರು. ಈ ಬಗ್ಗೆ ನನಗೇನೂ ಗೊತ್ತಿಲ್ಲ ಎಂದರು.