ನವದೆಹಲಿ, ಮಾ 16 (DaijiworldNews/DB): ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಸಾಮಾಜಿಕ ಜಾಲತಾಣಗಳೇ ಕಾರಣ ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ದೂಷಿಸಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ಮಾತನಾಡಿದ ಸೋನಿಯಾ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮದು. ಆದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹ್ಯಾಕ್ ಮಾಡಲು ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಫೇಸ್ಬುಕ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳು ಚುನಾವಣಾ ರಾಜಕೀಯದ ಮೇಲೆ ಪ್ರಭಾವ ಬೀರುತ್ತಿವೆ. ಇದನ್ನು ಕೊನೆಗಾಣಿಸಬೇಕಿದೆ ಎಂದು ಆಗ್ರಹಿಸಿದರು.
ಆಡಳಿತ ಮಂಡಳಿಯು ಕುತಂತ್ರ ನಡೆಸಿ ಫೇಸ್ಬುಕ್ ಮುಖಾಂತರ ಸಾಮಾಜಿಕ ಸಾಮರಸ್ಯ ಕದಡಲು ಕಾರಣವಾಗುತ್ತಿದೆ. ದೈತ್ಯ ಸಾಮಾಜಿಕ ಮಾಧ್ಯಮಗಳು ವ್ಯವಸ್ಥಿಕವಾಗಿ ಪ್ರಭಾವ ಬೀರುತ್ತಿವೆ. ಇಂತಹ ದುರುಪಯೋಗದ ವ್ಯವಸ್ಥೆಯನ್ನು ಕೊನೆಗಾಣಿಸಬೇಕಿದೆ ಎಂದರು.
ಸಾಮಾಜಿಕ ತಾಣಗಳ ಮುಖಾಂತರ ಯುವಕರು ಮತ್ತು ಹಿರಿಯರನ್ನು ಭಾವನಾತ್ಮಕವಾಗಿ ಉದ್ರೇಕಿಸುವ ಕೆಲಸವಾಗುತ್ತಿದೆ. ಆ ಮೂಲಕ ದ್ವೇಷ ತುಂಬುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದವರು ಇದೇ ವೇಳೆ ಆರೋಪಿಸಿದರು.