ಬೆಂಗಳೂರು, ಮಾ 16 (DaijiworldNews/MS): ಹಿಜಾಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿರುವ ಉಡುಪಿ ಕ್ಷೇತ್ರದ ಬಿಜೆಪಿ ಶಾಸಕ ರಘುಪತಿ ಭಟ್, " ಪ್ರಶ್ನಿಸುವ ಅಧಿಕಾರ ಎಲ್ಲರಿಗೂ ಇದೆ, ಆದರೆ ಸುಪ್ರೀಂ ಕೋರ್ಟ್ ನಲ್ಲೂ ಅರ್ಜಿ ಸಲ್ಲಿಸಿದವರ ವಿರುದ್ದ ತೀರ್ಪು ಬಂದು ಇಡೀ ದೇಶದಲ್ಲೇ ಹಿಜಾಬ್ ರದ್ದಾದರೆ ಅದಕ್ಕೆ ಕಾರಣಕರ್ತರು ಇವರೇ ಆಗುತ್ತಾರೆ ಎಂದು ಹೇಳಿದರು.
ಹೈಕೋರ್ಟ್ ನಲ್ಲಿ ತೀರ್ಪು ಕೊಟ್ಟ ತ್ರಿಸದಸ್ಯ ಪೀಠದ ನ್ಯಾಯಾಧೀಶರ ಕೆಲಸದ ಅನುಭವದಷ್ಟೂ ಈ ವಿದ್ಯಾರ್ಥಿನಿಯರಿಗೆ ವಯಸ್ಸಾಗಿಲ್ಲ. ಆದರೆ ಪ್ರಶ್ನಿಸುವ ಅಧಿಕಾರ ಎಲ್ಲರಿಗೂ ಇದೆ . ಹೀಗಾಗಿ ಸುಪ್ರೀಂ ಮೆಟ್ಟಿಲೇರಿದ್ದಾರೆ. ಈಗಾಗಲೇ ಸರ್ಕಾರದ ಸಮವಸ್ತ್ರ ಪಾಲನೆ ನಿಯಮವನ್ನು ಸಹ ಹೈಕೋರ್ಟ್ ಕೂಡ ಎತ್ತಿ ಹಿಡಿದಿದೆ ಎಂದರು.
ಯಾವುದೇ ವಿದ್ಯಾರ್ಥಿನಿಯನ್ನು ಡಿಬಾರ್ ಮಾಡುವ ಪ್ರಶ್ನೆಯೇ ಇಲ್ಲ. ಆದರೆ ರೆ ನಿಯಮ ಪಾಲಿಸದವರಿಗೆ ತರಗತಿಗಳಿಗೆ ಪ್ರವೇಶ ಕೊಡುವುದಿಲ್ಲ. ಇನ್ನು ಈ ಹಿಂದೆ ಪರೀಕ್ಷೆಗೆ ಗೈರಾಗಿದ್ದವರಿಗೆ ಮತ್ತೊಮ್ಮೆ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಒಂದೂವರೆ ವರ್ಷ ಹಿಜಾಬ್ ತೆಗೆದಿಟ್ಟಿದ್ದವರು ಈಗ ಹಿಜಾಬ್ ಬೇಕು ಎನ್ನುತ್ತಿದ್ದಾರೆ. ಹೈಕೋರ್ಟ್ ಆದೇಶವನ್ನು ಎಲ್ಲ ಶಾಲಾ ಕಾಲೇಜುಗಳು ಪಾಲಿಸಬೇಕು ಎಂದು ಹೇಳಿದರು.