ಹೈದರಾಬಾದ್, ಮಾ 15 (DaijiworldNews/DB): ಯುದ್ದಗ್ರಸ್ಥ ಉಕ್ರೇನ್ ನಿಂದ ವಾಪಸ್ಸಾದ ತೆಲಂಗಾಣದ ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳ ಮುಂದಿನ ಅಧ್ಯಯನಕ್ಕೆ ಧನಸಹಾಯ ನೀಡಲಾಗುವುದು ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಘೋಷಿಸಿದ್ದಾರೆ.
ಇಂದು ತೆಲಂಗಾಣ ರಾಜ್ಯ ವಿಧಾನಸಭೆಯಲ್ಲಿ ಅವರು ಈ ಘೋಷಣೆ ಮಾಡಿದರು.
ಉಕ್ರೇನ್ ನಲ್ಲಿ ಅಧ್ಯಯನನಿರತರಾಗಿದ್ದ ರಾಜ್ಯದ 740 ವಿದ್ಯಾರ್ಥಿಗಳು ಈಗ ಯುದ್ಧ ಪೀಡಿತ ರಾಷ್ಟ್ರದಿಂದ ಸ್ವರಾಜ್ಯಕ್ಕೆ ಮರಳಿದ್ದಾರೆ. ಅವರ ವಿದ್ಯಾಭ್ಯಾಸಕ್ಕೆ ತೊಡಕಾಗಬಾರದು ಎಂಬ ಕಾರಣಕ್ಕೆ ಧನಸಹಾಯ ಒದಗಿಸಲಾಗುವುದು. ಅಲ್ಲದೆ, ಈ ಬಗ್ಗೆ ನಾವು ಕೇಂದ್ರಕ್ಕೆ ಪತ್ರ ಬರೆಯುತ್ತೇವೆ ಎಂದರು.
ಭಾರತದಿಂದ ಸುಮಾರು 18,000 ವಿದ್ಯಾರ್ಥಿಗಳು ಉಕ್ರೇನ್ನ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಯುದ್ಧ ಭೀತಿ ಹಿನ್ನೆಲೆ ಕೇಂದ್ರ ಸರಕಾರವು ಆಪರೇಷನ್ ಗಂಗಾ ಕಾರ್ಯಾಚರಣೆಯಡಿ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆ ತಂದಿತ್ತು. ಈ ಪೈಕಿ 740 ಮಂದಿ ತೆಲಂಗಾಣ ವಿದ್ಯಾರ್ಥಿಗಳಿದ್ದರು.