ನವದೆಹಲಿ, ಮಾ 12 (DaijiworldNews/MS): ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಿದ ಹಿನ್ನೆಲೆಯಲ್ಲಿ "ಪಕ್ಷದ ಸೋಲಿನ ವಿಶ್ಲೇಷಣೆ" ಗಾಗಿ ಜಿ- 23ರ ಭಾಗವಾಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಗುಲಾಂ ನಬಿ ಆಜಾದ್ ಅವರ ನಿವಾಸದಲ್ಲಿ ಸಭೆ ನಡೆಸಿದರು.
'ಜಿ 23' ಅಥವಾ ಕಾಂಗ್ರೆಸ್ ವಲಯದಲ್ಲಿಯೇ ಗುರುತಿಸಿಕೊಂಡಿರುವ 23 ಭಿನ್ನಮತೀಯರ ಗುಂಪಾಗಿದ್ದು, ಪಕ್ಷದಲ್ಲಿ ವ್ಯಾಪಕ ಬದಲಾವಣೆಗಳನ್ನು ಬಯಸುತ್ತಿದ್ದಾರೆ.
ಈ ಸಭೆಯಲ್ಲಿ ಭಾಗವಹಿಸಿದ್ದ ಕೆಲವು ನಾಯಕರು ಮುಂದಿನ ಕಾರ್ಯಕಾರಿ ಸಮಿತಿಯಿಂದ ಹೊರಗುಳಿಯುವುದಾಗಿ ಹೇಳಿದ್ದಾರೆ. ಪಂಜಾಬ್ ಸೋಲಿನಲ್ಲಿ ಆದ ತಪ್ಪುಗಳು, ಎಐಸಿಸಿ ಗೆ ಶೀಘ್ರವೇ ಪೂರ್ಣಾವಧಿ ಅಧ್ಯಕ್ಷರನ್ನು ನೇಮಿಸಬೇಕು, ಹೊಸ ನಾಯಕತ್ವಕ್ಕೆ ಅವಕಾಶ ನೀಡಬೇಕು, ಪಕ್ಷದ ನಾಯಕರಲ್ಲೂ ಸಮನ್ವಯತೆ ಕಾಪಾಡಬೇಕು ಹೀಗೆ ಹಲವು ವಿಚಾರಗಳ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಚರ್ಚಿಸಬೇಕು ಎಂಬ ಮಾತುಗಳು 'ಜಿ -23’ ತಂಡದಿಂದ ಕೇಳಿಬಂದಿದೆ.
ಸಭೆಯಲ್ಲಿ ಆನಂದ್ ಶರ್ಮಾ, ಸಂಸದರಾದ ಕಪಿಲ್ ಸಿಬಲ್, ಮನೀಶ್ ತಿವಾರಿ ಮತ್ತು ಅಖಿಲೇಶ್ ಪ್ರಸಾದ್ ಸಿಂಗ್ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಸೇರಿದಂತೆ ಹಲವುರು ಹಾಜರಿದ್ದರು.