ಬೆಂಗಳೂರು, ಮಾ 12 (DaijiworldNews/HR): ತಾಯಿಯೊಬ್ಬರು ತನ್ನ ಮಾತು ಬಾರದ ಮಗನೊಂದಿಗೆ ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದು, ಒಂದು ದಿನ ಮೂಗನಾಗಿದ್ದಂತ ಮಗ ದಿಢೀರ್ ನಾಪತ್ತೆಯಾಗಿದ್ದನು.
2016ರ ಮಾರ್ಚ್ನಲ್ಲಿ ಪಾರ್ವತಮ್ಮ ಎಂಬುವರು, ತನ್ನ ಮಗ ಭರತ್ ಕುಮಾರ್ ಎಂಬಾತನನ್ನು ಕರೆದುಕೊಂಡು ಯಲಹಂಕದ ರೈತ ಸಂತೆಗೆ ತೆರಳಿದ್ದು, ಈ ವೇಳೆ ಮೂಗನಾಗಿದ್ದಂತ ಭರತ್ ದಿಢೀರ್ ನಾಪತ್ತೆಯಾಗಿದ್ದನು. ಈ ಬಗ್ಗೆ ಯಲಹಂಕ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ಕೂಡ ದಾಖಲಿಸಿದ್ದರು.
ಇನ್ನು ಯಲಹಂಕದಿಂದ ಭರತ್ ರೈಲು ಮೂಲಕ ನಾಗ್ಬುರ ಸೇರಿದ್ದು, ರೈಲ್ವೆ ನಿಲ್ದಾಣದಲ್ಲಿ ಓಡಾಡುತ್ತಿದ್ದಂತ ಪೊಲೀಸರು ಆತನನ್ನು ರಕ್ಷಿಸಿ, ಪುನರ್ ವಸತಿ ಕೇಂದ್ರಕ್ಕೆ ಕಳುಹಿಸಿದ್ದರು. ಅಲ್ಲಿಯೇ ಆಶ್ರಯದ ಮೂಲಕ ಬದುಕನ್ನು ಕಟ್ಟಿಕೊಂಡಿದ್ದನು.
ಮೂಗನಾಗಿದ್ದಂತ ಭರತ್ಗೆ ಪುನರ್ವಸತಿ ಕೇಂದ್ರದ ಅಧಿಕಾರಿಗಳು ಅನಿಲ್ ಮರಾಠೆ ಎಂದು ಹೆಸರು ಕೂಡ ಇಟ್ಟಿದ್ದು, 6 ವರ್ಷದ ಬಳಿಕ 2022ರಲ್ಲಿ ಅನಿಲ್ ಮರಾಠೆಗೆ ಆಧಾರ್ ಕಾರ್ಡ್ ಮಾಡಿಸೋದಕ್ಕಾಗಿ, ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ ಮಾಹಿತಿ ನೀಡಿ, ಬಂದಿದ್ದಾರೆ. ಆದರೆ ಅವರು ಸಲ್ಲಿಸಿದ್ದಂತ ಹೊಸ ಆಧಾರ್ ಕಾರ್ಡ್ ರಿಜೆಕ್ಟ್ ಆಗಿತ್ತು. ಇದಕ್ಕೆ ಕಾರಣ ಹುಡುಕಿದಾಗ ಇವರ ದತ್ತಾಂಶದಲ್ಲಿ ಈಗಾಗಲೇ ಬಿ ಭರತ್ ಕುಮಾರ್ ಎಂದು ಬೆಂಗಳೂರಿನಲ್ಲಿ ಆಧಾರ್ ಕಾರ್ಡ್ ಇದೆ ಎಂದು ತಿಳಿಸಿದ್ದಾರೆ. ಅಲ್ಲದೇ ಭರತ್ ಕುಮಾರ್ ತಾಯಿಯ ಮೊಬೈಲ್ ಸಂಖ್ಯೆ ಕೂಡ ನೀಡಿದ್ದಾರೆ.
ತಕ್ಷಣ ಅವರ ಸಂಖ್ಯೆಗೆ ಕರೆ ಮಾಡಿ, ಮಾಹಿತಿ ಪಡೆದಿದ್ದಾರೆ. ಜೊತೆಗೆ ಈ ಬಗ್ಗೆ ಯಲಹಂಕದ ಠಾಣೆ ಪೊಲೀಸರನ್ನು ಸಂಪರ್ಕಿಸಿದಾಗ, ಭರತ್ ಕುಮಾರ್ ಕಿಡ್ನಾಪ್ ಪ್ರಕರಣ ದಾಖಲಾಗಿರುವ ಬಗ್ಗೆ ಇನ್ಸ್ ಪೆಕ್ಟರ್ ಬಿ.ಸತ್ಯನಾರಾಯಣ ಹರಿಯಬ್ಬ ತಿಳಿಸಿದ್ದು, ಜೊತೆಗೆ ಭರತ್ ಕುಮಾರ್ ತಾಯಿಯನ್ನು ನಾಗ್ಬುರಕ್ಕೆ ಪೊಲೀಸರೊಂದಿಗೆ ಕಳುಹಿಸಿಕೊಟ್ಟು ನೆರವಾಗಿದ್ದಾರೆ.