ನವದೆಹಲಿ, ಮಾ 11 (DaijiworldNews/DB): ರಾಸಾಯನಿಕ ಅಸ್ತ್ರ ಬಳಸಿದರೆ ಎಚ್ಚರ ಎಂದು ರಷ್ಯಾಕ್ಕೆ ಅಮೆರಿಕ ಎಚ್ಚರಿಕೆ ನೀಡಿದ ಬೆನ್ನಲ್ಲೇ ಯುಎಸ್ ಬೆಂಬಲದಿಂದ ಉಕ್ರೇನ್ ಜೈವಿಕ ಅಸ್ತ್ರ ಪ್ರಯೋಗ ಮಾಡಿದೆ.
ಜೈವಿಕ ಅಸ್ತ್ರ ಬಳಕೆ ಬಗ್ಗೆ ಭಾರತ ವಿಶ್ವಸಂಸ್ಥೆಯಲ್ಲಿ ಕಳವಳ ವ್ಯಕ್ತಪಡಿಸಿದ್ದು, ಜೈವಿಕ ಮತ್ತು ವಿಷಕಾರಿ ಶಸ್ತ್ರಾಸ್ತ್ರಗಳ ಸಮಾವೇಶವನ್ನು ಕಾರ್ಯಗತಗೊಳಿಸುವ ಅಗತ್ಯವಿದೆ ಎಂದು ಹೇಳಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದ ತಿರುಮೂರ್ತಿ, ಜೈವಿಕ ಅಸ್ತ್ರ ಬಳಕೆಗೆ ಸಂಬಂಧಿಸಿದಂತೆ ಸರ್ಕಾರಗಳ ಇತ್ತೀಚಿನ ಹೇಳಿಕೆಗಳನ್ನು ಭಾರತ ಗಮನಿಸುತ್ತಿದೆ. ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ ಸಂಪೂರ್ಣ ವರ್ಗವನ್ನು ನಿಷೇಧಿಸುವ ನಿಟ್ಟಿನಲ್ಲಿ ಸಮಾವೇಶಕ್ಕೆ ಭಾರತ ಪ್ರಾಮುಖ್ಯತೆ ನೀಡುತ್ತದೆ ಎಂದು ಹೇಳಿದರು.
ಸದ್ಯದ ಪರಿಸ್ಥಿತಿ ಗಮನಿಸಿದರೆ ರಷ್ಯಾ ಹಾಗೂ ಉಕ್ರೇನ್ ನಡುವೆ ಸಮಾಲೋಚನೆ ಹಾಗೂ ಚರ್ಚೆ ಮೂಲಕ ನಿರ್ಧಾರವೊಂದನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ರಷ್ಯಾದ ಸಶಸ್ತ್ರ ಪಡೆಗಳು ಉಕ್ರೇನ್ ನ ವಿವಿಧೆಡೆ ತಮ್ಮ ಆಕ್ರಮಣಕಾರಿ ದಾಳಿಯನ್ನು ಮುಂದುವರಿಸುತ್ತಿವೆ. ಈ ನಿಟ್ಟಿನಲ್ಲಿ ಸಮಾವೇಶ ನಡೆಸಬೇಕಾದ ಅಗತ್ಯವನ್ನು ರಾಜಕೀಯ ಮತ್ತು ಶಾಂತಿ ನಿರ್ಮಾಣ ವ್ಯವಹಾರಗಳ ಅಧೀನ ಮಹಾ ಕಾರ್ಯದರ್ಶಿ ರೋಸ್ಮರಿ ಡಿಕಾರ್ಲೊ ಅವರು ಮಂಡಳಿಗೆ ತಿಳಿಸಿದರು.
ಮರಿಯುಪೋಲ್, ಖಾರ್ಕಿವ್, ಸುಮಿ ಮತ್ತು ಚೆರ್ನಿಹಿವ್ ಮೊದಲಾದ ನಗರಗಳಲ್ಲಿ ನಿತ್ಯ ಶೆಲ್ ದಾಳಿಗಳು ನಡೆಯುತ್ತಿದ್ದು, ಇದರಿಂದ ಅಲ್ಲಿನ ಜನ ಭಯದಿಂದಲೇ ಜೀವನ ನಡೆಸುವಂತಾಗಿದೆ. ಯುಎನ್ ಚಾರ್ಟರ್ ಮತ್ತು ಅಂತಾರಾಷ್ಟ್ರೀಯ ಕಾನೂನಿನ ತತ್ವಗಳಿಗೆ ಬದ್ಧವಾಗಿರಲು ಮತ್ತು ರಾಜ್ಯಗಳ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಗೌರವಿಸಲು ನಾವು ಮತ್ತೊಮ್ಮೆ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡುತ್ತೇವೆ ಎಂದು ತಿರುಮೂರ್ತಿ ಹೇಳಿದರು.