ಬೆಂಗಳೂರು, ಮಾ. 11 (DaijiworldNews/SM): ಪುತ್ತೂರು ನಗರ ಸಭೆಯಲ್ಲಿ ಕಳೆದ 12 ವರ್ಷದಿಂದ ನಿವೇಶನ ಹಂಚಿಕೆಯಾಗಿಲ್ಲ ಎಂದು ಶಾಸಕ ಸಂಜೀವ ಮಠಂದೂರು ಸದನದ ಗಮನಕ್ಕೆ ತಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಪ್ರಶ್ನೋತ್ತರ ಕಲಾಪದ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪಿಸಿದ ಶಾಸಕ ಮಠಂದೂರು, ಈಗಾಗಲೇ ನಿವೇಶನ ಪಡೆಯಬೇಕೆಂಬ ಆಕಾಂಕ್ಷಿಗಳು ಸುಮಾರು 9 ಸಾವಿರಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಪೌರಾಡಳಿತ ಸಚಿವ ಯಂ.ಟಿ.ಬಿ. ನಾಗರಾಜ್ ನೀಡಿರುವ ಉತ್ತರದಲ್ಲಿ ೧೯೫೪ ಅರ್ಜಿ ಮಾತ್ರವೆಂದು ತಪ್ಪಾಗಿ ಉಲ್ಲೇಖವಾಗಿದೆ. ಇದನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಮತ್ತೊಂದೆಡೆ ಇಲ್ಲಿಯ ತನಕ ಯಾರಿಗೂ ಕೂಡ ನಿವೇಶನ ನೀಡಲಾಗಿಲ್ಲ.
ಇನ್ನು ಸಚಿವರು ನೀಡಿರುವ ಉತ್ತರ ಸ್ಪಷ್ಟವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ನಮ್ಮ ಸರಕಾರ ಇಂದು ಹೊಸ ಹೊಸ ಯೋಜನೆ ತರುತ್ತಿದೆ. ಆದರೆ ಪುತ್ತೂರು ನಗರದಲ್ಲಿ ನಿವೇಶನ ನೀಡಲು ಜಾಗವಿಲ್ಲ. ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.
ಕನಿಷ್ಠ ಪಕ್ಷ ಬೆಂಗಳೂರು ಮಾದರಿಯಲ್ಲಿ ಫ್ಲ್ಯಾಟ್ ಸಿಸ್ಟಮ್ ರೀತಿಯಲ್ಲಿ ನಿವೇಶನ ನೀಡುವಂತೆ ಮನವಿ ಮಾಡಿದರು. ಇನ್ನು ಶಾಸಕರ ಪ್ರಶ್ನೆಗೆ ಪೌರಾಡಳಿತ ಸಚಿವ ಯಂ.ಟಿ.ಬಿ. ನಾಗರಾಜ್ ಉತ್ತರಿಸಿದ್ದು, ಅದಕ್ಕೂ ಶಾಸಕ ಸಂಜೀವ ಮಠಂದೂರು ಅಸಮಾಧಾನ ಹೊರಹಾಕಿದ್ದಾರೆ.