ಬೆಂಗಳೂರು, ಮಾ. 11 (DaijiworldNews/SM): ಪಂಚ ರಾಜ್ಯ ಚುನಾವಣೆ ಫಲಿತಾಂಶ ಗುರುವಾರಂದು ಹೊರ ಬಿದ್ದಿದ್ದು, ಈ ಬಗ್ಗೆ ಸದನದಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಯಡಿಯೂರಪ್ಪರನ್ನು ಅನಗತ್ಯವಾಗಿ ಸಿಎಂ ಸ್ಥಾನದಿಂದ ಮುಕ್ತಗೊಳಿಸಿದರು. ಅವರನ್ನು ಮನೆಗೆ ಕಳುಹಿಸಿದಂತೆ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಜನತೆ ಮನೆಗೆ ಕಳುಹಿಸಲಿದ್ದಾರೆ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.
ಯಡಿಯೂರಪ್ಪ ಅವರನ್ನು ಮುಕ್ತಗೊಳಿಸುವ ಅಗತ್ಯವಿರಲಿಲ್ಲ. ಇದರ ನೋವಿನಿಂದ ಅವರು ಮಾತನಾಡುತ್ತಿದ್ದಾರೆ. ನಾನು ರಾಜ್ಯ ಪ್ರವಾಸ ಮಾಡುತ್ತೇನೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಯತ್ನಿಸುತ್ತೇನೆ. ವಾಜಪೇಯಿಯವರಿಗೂ ಕೂಡ 2 ಬಾರಿ ಅಧಿಕಾರಕ್ಕೆ ಬರಲಾಗಿಲ್ಲ. ಅದೇ ರೀತಿಯಲ್ಲಿ ನೀವು ಕೂಡ ಈಗ ಒಂದು ಭ್ರಮೆಯಲ್ಲಿ ಹೇಳುತ್ತಿದ್ದೀರಿ. ನೀವು ಸದ್ಯ ಜನರ ಬಳಿಗೆ ಹೋಗಿಲ್ಲ. ಯಡಿಯೂರಪ್ಪರನ್ನು ಕಳಿಸಿದಾಗಲೇ ಜನರು ಬಿಜೆಪಿ ಪಕ್ಷವನ್ನು ಕೂಡ ಮನೆಗೆ ಕಳುಹಿಸಲು ತೀರ್ಮಾನಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಪಂಚರಾಜ್ಯಗಳಲ್ಲಿನ ರಾಜಕೀಯವೇ ಬೇರೆ. ಕರ್ನಾಟಕದ ರಾಜಕಾರಣವೇ ಬೇರೆ. ಬಿಜೆಪಿ ಸೋಲಿಸಲು ಇಲ್ಲಿನ ಜನ ತೀರ್ಮಾನಿಸಿದ್ದಾರೆ. ಜನರ ನಾಡಿ ಮಿಡಿತ ಅರಿತು ನಾನು ಮಾತನಾಡುತ್ತಿದ್ದೇನೆ. ಬಿಜೆಪಿ ಸೋಲಿಸಿ ಕಾಂಗ್ರೆಸ್ ಗೆ ಅಧಿಕಾರ ನೀಡುವುದು ನಾಡಿ ಮಿಡಿತ. ನಿಮ್ಮನ್ನು ಮುಕ್ತಗೊಳಿಸುವಾಗಲೇ ಜನ ತೀರ್ಮಾನಿಸಿದ್ದಾರೆ. ನೀವು ಕಂಡಿರುವ ಕನಸು ನನಸಾಗಲ್ಲ ಎಂದು ಸದನದಲ್ಲಿ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.