ಶಿವಮೊಗ್ಗ, ಮಾ 11 (DaijiworldNews/DB): ಶಿವಮೊಗ್ಗದಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ನಿವಾಸಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಶುಕ್ರವಾರ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
ಹರ್ಷನ ಅಗಲುವಿಕೆಯಿಂದ ಆತನ ಹೆತ್ತವರು ಅನುಭವಿಸುತ್ತಿರುವ ನೋವಿನಲ್ಲಿ ನಮಗೆ ಸಹಾನುಭೂತಿ ಇದೆ. ಇಂತಹ ಹೇಯ ಕೃತ್ಯಗಳ ಮೂಲಕ ನಮ್ಮ ಸಂಘಟನೆಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ. ಸರ್ಕಾರ ಮತ್ತು ಕಾನೂನು ಹರ್ಷನ ಸಾವಿಗೆ ನ್ಯಾಯ ಕೊಡಿಸುವುದೆಂಬ ವಿಶ್ವಾಸದಲ್ಲಿದ್ದೇವೆ. ಭಗವಂತನು ಆತನ ಹೆತ್ತವರಿಗೆ ದುಃಖವನ್ನು ಸಹಿಸುವ ಶಕ್ತಿ ಕರುಣಿಸಲಿ ಎಂದು ಸ್ವಾಮೀಜಿ ನುಡಿದರು.
ಕೆಲ ವರ್ಷಗಳ ಹಿಂದೆ ಕೋಮು ಸಂಘರ್ಷವೊಂದರಲ್ಲಿ ಪ್ರಾಣ ಕಳೆದುಕೊಂಡ ಹಿಂದೂ ಕಾರ್ಯಕರ್ತ ವಿಶ್ವನಾಥ ಅವರ ನಿವಾಸಕ್ಕೂ ಶ್ರೀಗಳು ಭೇಟಿ ನೀಡಿ, ದಯನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಆತನ ತಾಯಿಗೆ ಸಾಂತ್ವನ ಹೇಳಿದರು.
ಮಾನವೀಯತೆ ದಯೆ ಅನುಕಂಪಗಳು ಪ್ರಚಾರಕ್ಕೆ ಮಾತ್ರ ಎಂಬಂತಾಗಬಾರದು. ವಿಶ್ವನಾಥನ ಮರಣದ ಸಂದರ್ಭ ಅನೇಕ ಭರವಸೆ ನೀಡಿದ ಮಂದಿ ಒಂದಷ್ಟನ್ನು ಒದಗಿಸಿದ್ದರೂ ಇವತ್ತು ಈ ಹಿರಿ ಜೀವ ಇಷ್ಟು ಭವಣೆ ಪಡುವ ಅಗತ್ಯ ಇರಲಿಲ್ಲ. ಇದು ನಿಜಕ್ಕೂ ಬೇಸರದ ಸಂಗತಿ. ಇನ್ನಾದರೂ ಸಮಾಜ ಈ ಕುಟುಂಬಕ್ಕೂ ಒಂದಷ್ಟು ನೆರವಾಗಬೇಕು ಎಂದು ಶ್ರೀಗಳು ಆಶಿಸಿದರು.
ಶ್ರೀ ಮಠದ ವತಿಯಿಂದ ಮೃತ ಹರ್ಷ ಹೆತ್ತವರಿಗೆ 10 ಸಾವಿರ ರೂ. ಹಾಗೂ ವಿಶ್ವನಾಥ ಅವರ ತಾಯಿ ಮೀನಾಕ್ಷಮ್ಮ ಅವರಿಗೆ 1 ಲಕ್ಷ ರೂ ಸಾಂತ್ವನ ನಿಧಿ ನೀಡಿ ಫಲ ಮಂತ್ರಾಕ್ಷತೆಯಿತ್ತು ಆಶೀರ್ವದಿಸಿದರು. ಗೋಸಾಯಿ ಮಠದ ಸ್ವಾಮೀಜಿ
ಶ್ರೀಗಳ ಆಪ್ತರಾದ ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಭಟ್ ಮತ್ತಿತರರಿದ್ದರು.