ನವದೆಹಲಿ, ಮಾ 11 (DaijiworldNews/DB): ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು "ಸಮಾಪ್ತಿ ಪಕ್ಷ’ವಾಗಿ, ಬಹುಜನ ಸಮಾಜವಾದಿ ಪಕ್ಷವು ’ಬಿಲ್ ಕುಲ್ ಸಮಾಪ್ತಿ ಪಕ್ಷ’ವಾಗಿ ಅಸ್ತಿತ್ವದಲ್ಲಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಪಕ್ಷದ ಉತ್ತರ ಪ್ರದೇಶ ರಾಜ್ಯ ಸಹ ಉಸ್ತುವಾರಿ ಅರವಿಂದ ಮೆನನ್ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಇನ್ನೊಂದು ರಾಜಕೀಯ ಪಕ್ಷವಾದ ಆರ್ ಎಲ್ ಡಿಯು "ರೋಝ್ ಲುದಾಕ್ತ ದಲ್ (ಪ್ರತಿ ದಿನ ಬದಲಾವಣೆ) ಆಗಿದೆ. ಕೇಂದ್ರದಲ್ಲಿ ಯುಪಿಎ ಸರಕಾರ ಇದ್ದಾಗ ಕಾಂಗ್ರೆಸ್ ಭ್ರಷ್ಟಾಚಾರ ನಡೆಸಿದ್ದರ ಫಲವಾಗಿ ಜನ ಅದರ ಮೇಲೆ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ಪ್ರಸ್ತುತ ಯುಪಿಎ ಎಂದರೆ "ಉಲ್ಟಾ ಪಲ್ಟಾ ಅಲಯನ್ಸ್’ ಎಂದಾಗಿದೆ ಎಂದವರು ತಿಳಿಸಿದರು.
ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷಗಳು ವಂಶಾಡಳಿತ ಪಕ್ಷವಾದರೆ, ಬಿಜೆಪಿ ಪ್ರಜಾಪ್ರಭುತ್ವ ಪಕ್ಷವಾಗಿದೆ. ಸೋನಿಯಾ ಗಾಂಧಿ ಬಳಿಕ ಅವರ ಪುತ್ರ ರಾಹುಲ್ ಗಾಂಧಿ ಕಾಂಗ್ರೆಸ್ ಮುನ್ನಡೆಸುತ್ತಿದ್ದಾರೆ. ಮುಲಾಯಮ್ ಸಿಂಗ್ ಯಾದವ್ ಬಳಿಕ ಆಖಿಲೇಶ್ ಸಮಾಜವಾದಿ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂಬುದು ತಿಳಿದಿದೆ. ತೃಣಮೂಲ ಕಾಂಗ್ರೆಸ್ ನಲ್ಲಿಯೂ ಇದೇ ಸ್ಥಿತಿ ಇದೆ. ಆದರೆ ಬಿಜೆಪಿಯಲ್ಲಿಆಂತಹ ವಂಶಾಡಳಿತ ವ್ಯವಸ್ಥೆ ಇಲ್ಲ ಎಂದು ಇದೇ ವೇಳೆ ಮೆನನ್ ತಿಳಿಸಿದರು.
ಐದು ವರ್ಷಗಳ ಕಾಲ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಮಾಡಿದ ಜನಪರ ಸಾಧನೆಗಳೇ ಈ ಬಾರಿ ಅವರ ಅಭೂತಪೂರ್ವ ಗೆಲುವಿಗೆ ಶ್ರೀರಕ್ಷೆಯಾಗಿದೆ. ಜನಸಾಮಾನ್ಯರಿಗೆ ನಾವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.