ಬೆಂಗಳೂರು, ಮಾ 11 (DaijiworldNews/DB): ಹಿಂದುತ್ವದಲ್ಲಿ ಕಟು, ಮೃದು ಎಂಬುದಿಲ್ಲ. ಎಲ್ಲರನ್ನೂ ಒಳಗೊಳ್ಳುವುದೇ ನಿಜವಾದ ಹಿಂದುತ್ವ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಟು ಹಿಂದುತ್ವ ಪ್ರತಿಪಾದನೆ ನಡೆಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದುತ್ವನ್ನು ಜಾತಿವಾದಿಗಳು ತಪ್ಪಾಗಿ ಅರ್ಥೈಸಿದ್ದಾರೆ. ಸರ್ವೇಜನೋ ಸುಖಿನೋಭವಂತು ಇದೇ ಹಿಂದುತ್ವ. ನಮಗೆ ಕೇಸರಿ ಶಾಲೂ ಬೇಕು, ಸಾಬರ ಟೋಪಿಯೂ ಬೇಕು. ಕಟು, ಮೃದು ಎಂಬ ವ್ಯಾಖ್ಯಾನಗಳು ಇಲ್ಲ ಎಂದರು.
ಸಿದ್ದರಾಮಯ್ಯ ಅವರಂತವರು ಹಿಂದುತ್ವವನ್ನು ತಪ್ಪಾಗಿ ಹೇಳುತ್ತಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎಂಬುದೇ ನಮ್ಮ ಹಿಂದುತ್ವಎಂದವರು ವಿಶ್ಲೇಷಿಸಿದರು.
ನಾಲ್ಕು ರಾಜ್ಯಗಳಲ್ಲಿ ಆಡಳಿತ ಪರವಾದ ಅಲೆ ಇತ್ತು. ಪಂಜಾಬ್ ನಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಗೋವಾದಲ್ಲಿ ನಮ್ಮ ದಾಖಲೆ ಐತಿಹಾಸಿಕವಾಗಿದ್ದು, ಮೂರನೇ ಬಾರಿಗೆ ಮತದಾರರು ನಮ್ಮನ್ನು ಅಧಿಕಾರಕ್ಕೆ ಏರಿಸಿದ್ದಾರೆ. ಮಣಿಪುರ ಹೊರತುಪಡಿಸಿ ನಾಲ್ಕೂ ರಾಜ್ಯಗಳಲ್ಲಿ ಕರ್ನಾಟಕದ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ ಎಂದರು.