ಬೆಂಗಳೂರು, ಮಾ 11 (DaijiworldNews/DB): ಪಂಚರಾಜ್ಯ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಗೆ ದೊಡ್ಡ ಆಘಾತ ನೀಡಿದೆ. ಚುನಾವಣೆ ನಡೆದ ಐದೂ ರಾಜ್ಯಗಳ ಜನರ ನಾಡಿ ಮಿಡಿತ ಅರಿಯುವಲ್ಲಿ ನಮ್ಮ ಪಕ್ಷ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕ, ಗೋವಾ ಚುನಾವಣಾ ಉಸ್ತುವಾರಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಪಂಚರಾಜ್ಯ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಕ್ಷದ ಮಟ್ಟಿಗೆ ಹಿನ್ನಡೆಯಾದರೂ ಅಂತಿಮವಾಗಿ ಜನಾದೇಶಕ್ಕೆ ಗೌರವ ಕೊಡಲೇಬೇಕು. ಗೋವಾದಲ್ಲಿ ನನ್ನ ಉಸ್ತುವಾರಿಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿಲ್ಲ ಎಂಬ ಬಗ್ಗೆ ನಿರಾಸೆಯಿದೆ. ಬಿಜೆಪಿಯ ವೈಫಲ್ಯಗಳನ್ನು ಜನರಿಗೆ ತಲುಪಿಸಲು ನಾವು ಎಡವಿದ್ದೇವೆ. ಇದರ ಲಾಭವನ್ನು ಬಿಜೆಪಿ ಪಡೆದುಕೊಂಡಿದೆ. ಆದಾಗ್ಯೂ ಪಕ್ಷದ ಸಾಧನೆ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ ಎಂದವರು ಟ್ವೀಟಿಸಿದ್ದಾರೆ.
ಬಿಜೆಪಿಯ ಷಡ್ಯಂತ್ರ ಹಾಗೂ ಕುದುರೆ ವ್ಯಾಪಾರದಿಂದ ಶೂನ್ಯದಲ್ಲಿದ್ದ ಕಾಂಗ್ರೆಸ್ 11 ಸ್ಥಾನ ಗಳಿಸಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಂಜಾಬ್ ಫಲಿತಾಂಶ ಪಕ್ಷದ ಮಟ್ಟಿಗೆ ದೊಡ್ಡ ಆಘಾತವಾಗಿದೆ. ಉತ್ತರಾಖಂಡ ಹಾಗೂ ಮಣಿಪುರದಲ್ಲೂ ನಾವು ನಿರೀಕ್ಷಿಸಿದ ಫಲಿತಾಂಶ ಬಂದಿಲ್ಲ ಎಂದವರು ಬರೆದುಕೊಂಡಿದ್ದಾರೆ.