ನವದೆಹಲಿ, ಮಾ 11(DaijiworldNews/MS): ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನುಭವಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಸಂಸದ ಶಶಿ ತರೂರ್ ಅವರು, ಕಾಂಗ್ರೆಸ್ ನಂಬಿದ ಭಾರತವನ್ನು ಕಟ್ಟಬೇಕು ಹಾಗೂ ಪಕ್ಷದ ಸಾಂಸ್ಥಿಕ ನಾಯಕತ್ವವನ್ನು ಪುನರುಜ್ಜೀವನಗೊಳಿಸುವ ರೀತಿಯಲ್ಲಿ ಸುಧಾರಿಸುವ ಸಮಯ ಬಂದಿದೆ ಎಂದು ಗುರುವಾರ ಹೇಳಿದ್ದಾರೆ.
ಬಿಜೆಪಿಯು ರಾಜಕೀಯವಾಗಿ ನಿರ್ಣಾಯಕವಾಗಿ ಉತ್ತರ ಪ್ರದೇಶದಲ್ಲಿ ಎರಡನೇ ನೇರ ಗೆಲುವು ಸಾಧಿಸಿದೆ. ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿಯೂ ಪ್ರಾಬಲ್ಯ ಸಾಧಿಸಿದೆ,. ಆಮ್ ಆದ್ಮಿ ಪಕ್ಷವು ಪಂಜಾಬ್ನಲ್ಲಿ ಭಾರಿ ಗೆಲುವು ಸಾಧಿಸಿದ್ದು. ಐದೂ ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲಿನತ್ತ ಮುಖಮಾಡಿದೆ. ಈ ಹಿನ್ನಲೆಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, 'ಮುಂಬರುವ ಚುನಾವಣೆಗಳಲ್ಲಿ ಪಕ್ಷಕ್ಕೆ ಗೆಲುವು ಸಿಗಬೇಕು. ಕಾಂಗ್ರೆಸ್ ನಂಬಿದ ಭಾರತವನ್ನು ಕಟ್ಟಬೇಕು ಇತ್ತೀಚಿನ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆಯಿರುವ ನಮ್ಮೆಲ್ಲರನ್ನೂ ನೋಯಿಸುತ್ತಿದೆ'.
'ಒಂದು ವಿಷಯ ಸ್ಪಷ್ಟವಾಗಿದೆ - ನಾವು ಯಶಸ್ವಿಯಾಗಬೇಕಾದರೆ ಬದಲಾವಣೆ ಅನಿವಾರ್ಯ, ಜನರ ವಿಶ್ವಾಸ ಗಳಿಸಬೇಕು ಎಂದಾದಲ್ಲಿ ಪಕ್ಷದ ಸಂಘಟನೆ ಹಾಗೂ ನಾಯಕತ್ವ ಬಲಗೊಳ್ಳುವುದು ಅಗತ್ಯ ಹಾಗೂ ಅನಿವಾರ್ಯ' ಎಂದು ಹೇಳಿದ್ದಾರೆ.