ಬೆಂಗಳೂರು, ಮಾ. 10 (DaijiworldNews/SM): ಈ ಹಿಂದೆ ಪಂಜಾಬ್ ನಲ್ಲಿ ನಾವು ಅಧಿಕಾರದಲ್ಲಿದ್ದೆವು. ಆದರೆ, ಈ ಬಾರಿ ನಾವು ಅದನ್ನು ಕಳೆದುಕೊಂಡಿದ್ದೇವೆ. ಪಂಜಾಬ್ ನಲ್ಲಿ ಮಾತ್ರವೇ ನಮಗೆ ಸೋಲಾಗಿದೆ ಎಂದು ವಿಧಾನಸಭಾ ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
'ನಮಗೆ ಕೈತಪ್ಪಿದ್ದು ಪಂಜಾಬ್ ರಾಜ್ಯ ಒಂದೇ. ಅಲ್ಲಿ ಏನು ಬಿಜೆಪಿ ಅಧಿಕಾರಕ್ಕೆ ಬಂದಿದಯೇ? ಅವರು ಪ್ರಶ್ನಿಸಿದ್ದಾರೆ. ಪಂಚರಾಜ್ಯ ಚುನಾವಣಾ ಫಲಿತಾಂಶ ಗಮನಿಸಿದ ಸಂದರ್ಭದಲ್ಲಿ ಈ ಹಿಂದೆ ಕಾಂಗ್ರೆಸ್ ಪಂಜಾಬ್ ನಲ್ಲಿ ಅಧಿಕಾರದಲ್ಲಿತ್ತು. ಅದು ನಮ್ಮ ಕೈ ತಪ್ಪಿದೆ. ಉಳಿದ ಯಾವುದೇ ರಾಜ್ಯದಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿಲ್ಲ ಎಂಬುವುದಾಗಿ ಅವರು ತಿಳಿಸಿದ್ದಾರೆ.
ಪಂಚರಾಜ್ಯ ಚುನಾವಣಾ ಫಲಿತಾಂಶದಿಂದ ಬಿಜೆಪಿ ಹಿಗ್ಗಿಕೊಳ್ಳುವಂತಹ ಸಾಧನೆಯನ್ನೇನು ಮಾಡಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. 'ನಮ್ಮ ತಪ್ಪಿನಿಂದಾಗಿ ಪಂಜಾಬ್ ಕಳೆದುಕೊಂಡಿದ್ದೇವೆ. ಆದರೆ, ಚುನಾವಣೆಗಿಂತ ಮುಂಚೆಯೇ ಅಲ್ಲಿಯೇನೂ ಬಹಳ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಹೀಗಾಗಿ ನಮ್ಮ ಸೋಲು ಪಂಜಾಬ್ ಮಾತ್ರ' ಎಂದು ಹೇಳಿದ್ದಾರೆ. ಉಳಿದ ರಾಜ್ಯಗಳಲ್ಲಿ ಈ ಹಿಂದೆ ಬಿಜೆಪಿ ಅಧಿಕಾರದಲ್ಲಿತ್ತು. ಈ ಬಾರಿಯೂ ಕೂಡ ಜನ ಅದೇ ಪಕ್ಷಕ್ಕೆ ಆಶೀರ್ವಾದ ನೀಡಿದ್ದಾರೆ. ಅದರಲ್ಲಿ ಸಂಭ್ರಮಿಸುವುದೇನಿದೆ ಮಹಾ ಎಂದು ಅವರು ಪ್ರಶ್ನಿಸಿದ್ದಾರೆ.