ನವದೆಹಲಿ, ಮಾ 10 (DaijiworldNews/DB): ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವಿದೆ. ನಾವು ಈ ದೇಶದ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ಸಂಚಾಲಕ ಆರವಿಂದ ಕೇಜ್ರೀವಾಲ್ ಹೇಳಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಎಂದೂ ಹುಸಿಗೊಳಿಸದೆ, ಅಭಿವೃದ್ಧಿ ಮಾಡಿ ತೋರಿಸುತ್ತೇವೆ. ಪಂಜಾಬ್ ನ ನೂತನ ಮುಖ್ಯಮಂತ್ರಿಯಾಗುತ್ತಿರುವ ಭಗವಂತ್ ಮಾನ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬ್ರಿಟಿಷರು ದೇಶದಿಂದ ನಿರ್ಗಮಿಸಿದ ಬಳಿಕವೂ ವ್ಯವಸ್ಥೆ ಅದೇ ರೀತಿ ಮುಂದುವರಿದರೆ ಏನೂ ಪ್ರಯೋಜನವಿಲ್ಲ. ಆಡಳಿತರೂಢ ಪಕ್ಷಗಳು ಲೂಟಿ ಮಾಡುವುದೇ ಕಾಯಕವಾಗಿಸಿಕೊಂಡಿವೆಯೇ ಹೊರತು ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದಿಲ್ಲ. ಅಂತಹ ಬದಲಾಗದ ವ್ಯವಸ್ಥೆಯನ್ನು ಎಎಪಿ ಬದಲಾಯಿಸಲಿದೆ ಎಂದವರು ಇದೇ ವೇಳೆ ತಿಳಿಸಿದರು.