ನವದೆಹಲಿ, ಮಾ 10 (DaijiworldNews/DB): ಪಂಚರಾಜ್ಯ ಚುನಾವಣೆಯಲ್ಲಿ ಪಂಜಾಬ್ ನಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡುವಂತೆ ಹೈಕಮಾಂಡ್ ನಿಂದ ಸೂಚನೆ ಬಂದಿದೆ. ಅಲ್ಲದೆ, ಸಿಎಂ ಚರಣ್ ಜಿತ್ ಸಿಂಗ್ ಅವರಿಗೂ ರಾಜೀನಾಮೆಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಇಬ್ಬರೂ ನಾಯಕರು ಚುನಾವಣೆಯಲ್ಲಿ ಸೋಲು ಕಂಡಿರುವುದರಿಂದ ಮತ್ತು ಪಂಜಾಬ್ ನಲ್ಲಿ ಎಎಪಿ ಗೆದ್ದಿ ಬೀಗಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟಾಗಿದ್ದು, ಇದರ ಭಾಗವಾಗಿ ನಾಯಕರಿಬ್ಬರ ರಾಜೀನಾಮೆಗೆ ಸೂಚನೆ ಬಂದಿದೆ.
ಇದೇ ವೇಳೆ ಗುರುವಾರ ಸಂಜೆ 5 ಗಂಟೆಗೆ ಕರೆಯಲಾಗಿದ್ದ ಕಾಂಗ್ರೆಸ್ ಪಕ್ಷದ ಸಿಎಲ್ ಪಿ ಮೀಟಿಂಗ್ ಕೂಡಾ ರದ್ದುಗೊಂಡಿದೆ. ಈ ಸಭೆಯನ್ನು ಖುದ್ದು ನವಜೋತ್ ಸಿಂಗ್ ಸಿಧು ಅವರೇ ಕರೆದಿದ್ದರು.
ಅಮೃತಸರ ಪೂರ್ವದಲ್ಲಿ ನವಜೋತ್ ಸಿಂಗ್ ಸಿಧು ಅವರ ವಿರುದ್ಧ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷದ ಜೀವನ್ ಜ್ಯೋತ್ ಕೌರ್ 12145 ಮತಗಳನ್ನು ಪಡೆದು ಜಯ ಗಳಿಸಿದ್ದರು. ಸಿಧು 10080 ಮತಗಳನ್ನಷ್ಟೇ ಪಡೆದು ಪರಾಭವಗೊಂಡಿದ್ದರು.