ಬೆಂಗಳೂರು, ಮಾ 10 (DaijiworldNews/HR): ಕಾಂಗ್ರೆಸ್ನವರು ಇನ್ಮುಂದೆ ಕೃಷ್ಣೆ, ಮೇಕೆದಾಟು, ವಿಧಾನಸೌಧದ ಕಡೆ ನಡಿಗೆ ಹೋಗುವುದು ಬೇಡ. ಅವರು ಇಟಲಿ ಕಡೆ ನಡಿಗೆ ಹೋಗಲಿ ಎಂದು ಕಾಂಗ್ರೆಸ್ ನಾಯಕರ ಬಗ್ಗೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ನಮ್ಮ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಅವರು ಒಳಒಪ್ಪಂದ ಮಾಡಿಕೊಂಡಿಲ್ಲವೆಂದಾದರೆ ಬಾದಾಮಿ ಹೇಗೆ ಅಭಿವೃದ್ಧಿ ಆಗುತ್ತಿತ್ತು? ರಾಜ್ಯದಲ್ಲಿ ಶಿಕಾರಿಪುರ ಬಿಟ್ಟರೆ ಬಾದಾಮಿ ಕ್ಷೇತ್ರಕ್ಕೆ ಹೆಚ್ಚು ಹಣ ಹೋಗಿರೋದು ಎಂದರು.
ಇನ್ನು ಸದನದಲ್ಲಿ ಸಿದ್ದರಾಮಯ್ಯ ಗ್ಯಾಂಗ್ ಮಾತ್ರ ಇದೆ. ಆದರೆ ಕಚ್ಚಾ ಬಾದಾಮ್ ಗ್ಯಾಂಗ್ ಇರಲಿಲ್ಲ ಎಂದಿದ್ದಾರೆ.
ಕಚ್ಚಾ ಬಾದಾಮ್ ಗ್ಯಾಂಗ್ ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಆಗಲೆಂದು ಪಾದಯಾತ್ರೆ ಮಾಡುತ್ತಿದ್ದಾರಲ್ಲ ಅವರೇ ಕಚ್ಚಾ ಬಾದಾಮ್ ಗ್ಯಾಂಗ್ ನವರು ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ಗೆ ಟಾಂಗ್ ನೀಡಿದ್ದಾರೆ.