ಮೈಸೂರು, ಮಾ 10 (DaijiworldNews/DB): ಸಾ.ರಾ. ಮಹೇಶ್ ಬೆಂಬಲಿಗರು ಸಂಸದೆ ಸುಮಲತಾ ಅವರಿಗೆ ಗುದ್ದಲಿ ಪೂಜೆ ನೆರವೇರಿಸಲು ಅವಕಾಶ ನೀಡದೆ ಅಡ್ಡಿಪಡಿಸಿದ ಘಟನೆ ಮೈಸೂರಿನ ಕೆ.ಆರ್. ನಗರ ತಾಲೂಕಿನಲ್ಲಿ ನಡೆದಿದೆ.
ಕೆ.ಆರ್. ನಗರ ತಾಲೂಕಿನ ಮಂಜನಹಳ್ಳಿಯಲ್ಲಿ ಕಾಮಗಾರಿಯೊಂದರ ಗುದ್ದಲಿ ಪೂಜೆ ನೆರವೇರಿಸಲು ಸುಮಲತಾ ಆಗಮಿಸಿದ್ದರು. ಶಾಸಕ ಸಾ.ರಾ. ಮಹೇಶ್ ಅವರನ್ನು ಬಿಟ್ಟು ಕಾಮಗಾರಿಗೆ ಚಾಲನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಈ ವೇಳೆ ಸಾ.ರಾ. ಮಹೇಶ್ ಬೆಂಬಲಿಗರು ಗುದ್ದಲಿಪೂಜೆಗೆ ಅಡ್ಡಿ ಪಡಿಸಿದರು.
ಅಲ್ಲದೆ, ಮಾತಿನ ಚಕಮಕಿ ನಡೆದು ಒಮ್ಮೆ ಸಂಘರ್ಷ ತಾರಕ್ಕೇರಿತ್ತು. ಶಾಸಕ-ಸಂಸದರ ಬೆಂಬಲಿಗರು ಪರಸ್ಪರ ಧಿಕ್ಕಾರ ಕೂಗಿದರು. ಈ ವೇಳೆ ಶಾಸಕರ ಬೆಂಬಲಿಗರು ಶಾಮಿಯಾನ ಕಿತ್ತೆಸೆದು ಗಲಾಟೆ ಎಬ್ಬಿಸಿದ ಕಾರಣ ಮಾತಿನ ಚಕಮಕಿ ನಡೆಯಿತು.
ಬಳಿಕ ಸ್ಥಳೀಯ ಮಹಿಳೆಯರು ಖುದ್ದು ನಿಂತು ಸಂಸದೆ ಕೈಯಿಂದ ಗುದ್ದಲಿ ಪೂಜೆ ನೆರವೇರಿಸಿದರು.
ಕಾರು ಚಾಲಕನಿಗೆ ಥಳಿತ:
ಇದೇ ವೇಳೆ ಶಾಸಕರ ಬೆಂಬಲಿಗರ ಗುಂಪೊಂದು ಸುಮಲತಾ ಕಾರಿ ಚಾಲಕ ನಂಜುಂಡ ಅವರಿಗೆ ಥಳಿಸಿ ಗಾಯಗೊಳಿಸಿದ್ದಾರೆ. ಈ ಸಂಬಂಧ ಜೆಡಿಎಸ್ ಕಾರ್ಯಕರ್ತರಾದ ಅನೀಫ್, ಧನು ಹಾಗೂ ಇತರ 7 ಮಂದಿಯ ವಿರುದ್ಧ ಸಂಸದೆ ಸುಮಲತಾ ದೂರು ದಾಖಲಿಸಿದ್ದಾರೆ.