ನವದೆಹಲಿ, ಮಾ 10 (DaijiworldNews/MS): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೋಟ್ಯಂತರ ಜನರ ಆಶಾಕಿರಣವಾಗಿದ್ದಾರೆ. ಹೀಗಾಗಿ ಜನತೆ ಅವಕಾಶ ನೀಡಿದರೆ, ಮುಂದಿನ ಲೋಕಸಭಾ ಚುನಾವಣೆಯ ನಂತರ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ಎಎಪಿ ಮುಖಂಡ ರಾಘವ್ ಚಡ್ಡಾ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ಚುನಾವಣಾ ಫಲಿತಾಂಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೀ ಕಡಿಮೆ ಅವಧಿಯಲ್ಲಿ ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಗಿದೆ. ಕೈ ಮುಖಂಡರ ನಡುವೆ ಉಂಟಾಗಿದ್ದ ರಾಜಕೀಯ ಭಿನ್ನಾಭಿಪ್ರಾಯದ ಲಾಭ ಪಡೆಯುವಲ್ಲಿ ನಮ್ಮ ಪಕ್ಷ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
"ಅರವಿಂದ್ ಕೇಜ್ರಿವಾಲ್ ಕೋಟ್ಯಂತರ ಜನರ ಆಶಾಕಿರಣವಾಗಿದ್ದಾರೆ. ದೇವರು ಸಿದ್ಧರಿದ್ದರೆ ಮತ್ತು ಜನರು ಅವಕಾಶವನ್ನು ನೀಡಿದರೆ, ಅವರು ಖಂಡಿತವಾಗಿಯೂ ಪ್ರಧಾನ ಮಂತ್ರಿಯ ಸ್ಥಾನದಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳುತ್ತಾರೆ ಎಎಪಿ ಪ್ರಮುಖ ರಾಷ್ಟ್ರೀಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತದೆ. ದೇಶದಲ್ಲಿ ಅತಿದೊಡ್ಡ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ನ ಸ್ಥಾನವನ್ನು ಇದೀಗ ಎಎಪಿ ತುಂಬುಲಿದೆ ಎಂದು ಹೇಳಿದ್ದಾರೆ.
ಎಎಪಿ ಪಕ್ಷಕ್ಕೆ ಇನ್ನು 10 ವರ್ಷ ಕೂಡ ಆಗಿಲ್ಲ ಆದರೂ ಪಂಜಾಬ್ ಮತ್ತು ದೆಹಲಿಯಲ್ಲಿ ನಾವು ಗೆದ್ದಿದ್ದೇವೆ, ಪಂಜಾಬ್ ನಲ್ಲಿ ನಡೆದ ಸಮೀಕ್ಷೆಗಳು ಎಎಪಿ ರಾಷ್ಟ್ರೀಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ತೋರಿಸುತ್ತದೆ. ಬಿಜೆಪಿ ತನ್ನ ಮೊದಲ ಸರ್ಕಾರ ರಚಿಸಲು ಹತ್ತು ವರ್ಷಗಳನ್ನು ತೆಗೆದುಕೊಂಡಿತು. ಎಎಪಿ ಪ್ರಾರಂಭವಾಗಿ ಇನ್ನೂ ಹತ್ತು ವರ್ಷಗಳು ಆಗಿಲ್ಲ ಮತ್ತು ನಾವು ಎರಡು ರಾಜ್ಯಗಳಲ್ಲಿ ಸರ್ಕಾರ ರಚಿಸುತ್ತಿದ್ದೇವೆ . ಭವಿಷ್ಯದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿಗೆ ಸವಾಲಾಗಲಿದ್ದಾರೆ ಎಂದು ಹೇಳಿದ್ದಾರೆ