ನವದೆಹಲಿ, ಮಾ 10 (DaijiworldNews/HR): ಚುನಾವಣಾ ಆಯೋಗವು ಒಂದು ರಾಷ್ಟ್ರ ಒಂದು ಚುನಾವಣೆ ನಡೆಸಲು ಸಂಪೂರ್ಣವಾಗಿ ಸಜ್ಜಾಗಿದೆ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಒಂದು ರಾಷ್ಟ್ರ ಒಂದು ಚುನಾವಣೆ ಉತ್ತಮ ಸಲಹೆಯಾಗಿದ್ದು, ಅದನ್ನು ಸಂಸತ್ತಿನಲ್ಲಿ ನಿರ್ಧರಿಸಬೇಕು. ಅದಕ್ಕೆ ಚುನಾವಣಾ ಆಯೋಗವು ಸಂಪೂರ್ಣ ಸನ್ನದ್ಧವಾಗಿದೆ ಎಂದರು.
ಇನ್ನು ಸಂವಿಧಾನದ ಪ್ರಕಾರ ಎಲ್ಲ ಚುನಾವಣೆಗಳು ಏಕಕಾಲಕ್ಕೆ ನಡೆಯಬೇಕು. ಆದರೆ ಕೆಲವೊಮ್ಮೆ ವಿಧಾನಸಭೆ ವಿಸರ್ಜನೆಯಿಂದಾಗಿ ವೇಳಾಪಟ್ಟಿ ಬದಲಾಗುತ್ತವೆ. ಒಂದು ರಾಷ್ಟ್ರ ಒಂದು ಚುನಾವಣೆ ಉತ್ತಮ ಸಲಹೆಯಾಗಿದೆ. ಆದರೆ ಇದಕ್ಕೆ ಸಂವಿಧಾನದಲ್ಲಿ ಬದಲಾವಣೆಯ ಅಗತ್ಯವಿದೆ ಎಂದಿದ್ದಾರೆ.
ಪಂಚ ರಾಜ್ಯಗಳ ಚುನಾವಣೆಯ ಕುರಿತು ಮಾತನಾಡಿದ ಅವರು, ಚುನಾವಣಾ ರ್ಯಾಲಿಗಳು ಮತ್ತು ಪಾದಯಾತ್ರೆಗಳನ್ನು ನಿಷೇಧಿಸುವುದು ಕಠಿಣ ನಿರ್ಧಾರವಾಗಿತ್ತು ಎಂದು ಹೇಳಿದ್ದಾರೆ.