ಚಂಡೀಗಢ, ಮಾ 10 (DaijiworldNews/MS): ಪಂಜಾಬ್ ನಲ್ಲಿ ಕಾಂಗ್ರೆಸ್’ನ ಭದ್ರಕೋಟೆಯನ್ನು ಆಮ್ ಆದ್ಮಿ ಪಕ್ಷ ಭೇದಿಸಿದ್ದು, ಇದು ದೆಹಲಿಯ ಹೊರಗೆ ಅರವಿಂದ್ ಕೇಜ್ರಿವಾಲ್ ಅವರ ಮೊದಲ ದೊಡ್ಡ ಗೆಲುವಾಗಿದೆ.
ಚುನಾವಣೆಗೆ ಹಲವು ತಿಂಗಳುಗಳ ಹಿಂದೆ, ಕಾಂಗ್ರೆಸ್ ರಾಜ್ಯಾಧ್ಯಕ್ಷರು, ಮತ್ತು ಮುಖ್ಯಮಂತ್ರಿ ಒಗ್ಗಟ್ಟಾಗಿರದೇ ಆಂತರಿಕ ಕಲಹ ಜೋರಾಗಿ ಸದ್ದು ಮಾಡಿತ್ತು. ನವಜೋತ್ ಸಿಧು ಮತ್ತು ಅಮರಿಂದರ್ ಸಿಂಗ್ ನಡುವೆ ಪ್ರಾರಂಭವಾದ ಭಿನ್ನಾಭಿಪ್ರಾಯ, ಬಳಿಕ ಮುಖ್ಯಮಂತ್ರಿಯಾದ ಚರಂಜಿತ್ ಸಿಂಗ್ ಚನ್ನಿ ನಡುವೆಯೂ ಮುಂದುವರೆಯಿತು,ಆದರೆ, ಚನ್ನಿಯನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ ನಂತರ ಕಾಂಗ್ರೆಸ್ ಒಗ್ಗಟ್ಟನ್ನು ಪ್ರದರ್ಶಿಸಿತು. ಆದರೆ ಚುನಾವಣಾ ಫಲಿತಾಂಶ ಸದ್ಯ ಸ್ಥಿತಿ ಗಮನಿಸಿದರೆ ಪಂಜಾಬ್ ಜನತೆ ಎಎಪಿ ಕಡೆ ಒಲವು ತೋರಿದಂತೆ ಕಾಣುತ್ತದೆ.
ಪಂಜಾಬ್ನಲ್ಲಿ ಆಮ್ ಆದ್ಮಿಗೆ 89, ಕಾಂಗ್ರೆಸ್ 17 ಹಾಗೂ ಬಿಜೆಪಿ 4 ಕ್ಷೇತ್ರಗಳಲ್ಲಿ ಮುನ್ನಡೆಗಳಿಸಿದ್ದು, ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದೆ.
ಆಮ್ ಆದ್ಮಿ ಪಾರ್ಟಿ ಗೆಲುವಿನತ್ತ ದಾಪುಗಾಲಿಡುತ್ತಿದ್ದು, "ಇನ್ನು ಮುಂದೆ ಪಂಜಾಬ್ ಅನ್ನು 'ಉಡ್ತಾ ಪಂಜಾಬ್' ಎಂದು ಕರೆಯಲಾಗುವುದಿಲ್ಲ, ಆದರೆ 'ಉಡ್ತಾ ಪಂಜಾಬ್'... ಎಲ್ಲಾ ಕ್ರೆಡಿಟ್ ಆಪ್ ಕಾರ್ಯಕರ್ತರಿಗೆ ಸಲ್ಲುತ್ತದೆ" ಆಪ್ ಪಂಜಾಬ್ ಸಹ ಉಸ್ತುವಾರಿ ರಾಘವ ಚಂದ್ರ ಹೇಳಿದ್ದಾರೆ.
" ಕೇಜ್ರಿವಾಲ್ ಅವರ ಮಾದರಿ ಆಡಳಿತ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದು ಜನಸಾಮಾನ್ಯನ (ಆಮ್ ಆದ್ಮಿ) ಗೆಲುವು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮಾದರಿ ಆಡಳಿತಕ್ಕೆ ಪಂಜಾಬ್ ಅವಕಾಶ ನೀಡಿದೆ "ಎಂದು ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಪ್ರತಿಕ್ರಿಯಿಸಿದ್ದಾರೆ.