ಪಣಜಿ, ಮಾ 10 (DaijiworldNews/MS): ಗೋವಾದಲ್ಲಿ ಮತ ಎಣಿಕೆ ಪ್ರಾರಂಭವಾಗುವ ಮೊದಲು, ವಿಶ್ವಾಸದ ಪ್ರದರ್ಶನದಲ್ಲಿ ಕಾಂಗ್ರೆಸ್, ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿಗೆ ಅವಕಾಶ ಕೋರಿದೆ. ಇದರ ಮಧ್ಯೆ ಕುದುರೆ ವ್ಯಾಪಾರ ಆರಂಭವಾಗಬಹುದೆಂಬ ಭೀತಿ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು, ತಮ್ಮ ಅಭ್ಯರ್ಥಿಗಳು ರೆಸಾರ್ಟ್ ನಲ್ಲಿ ತಂಗಿದ್ದು, ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಹೊಟೇಲ್ ಗೆ ಟೈಟ್ ಸೆಕ್ಯುರಿಟಿ ನೀಡಲಾಗಿದೆ.
ಗೋವಾದಲ್ಲಿ ಒಟ್ಟು 40 ಕ್ಷೇತ್ರಗಳಿದ್ದು ಅಧಿಕಾರ ವಹಿಸಲು ಮ್ಯಾಜಿಕ್ ನಂಬರ್ 21 ಆಗಿದೆ. ಈಗಿನ ಟ್ರೆಂಡ್ ಪ್ರಕಾರ ಬಿಜೆಪಿ 18 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 12 ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಹೀಗಾಗಿ ಗೋವಾದಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಈ ನಡುವೆ ಕಾಂಗ್ರೆಸ್ಸಿಗರು ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯಪಾಲರ ಭೇಟಿಗೆ ಸಜ್ಜಾಗಿದ್ದಾರೆ. ಅಧಿಕಾರಕ್ಕಾಗಿ ಮೊದಲೇ ಮುಖ್ಯಮಂತ್ರಿ ಖರ್ಚಿಗೆ ಟವಲ್ ಹಾಕಿದ್ದಾರೆ. ಆದರೆ ಭೇಟಿಗೆ ಅವಕಾಶ ರಾಜ್ಯಪಾಲರು ಇನ್ನು ಕೊಟ್ಟಿಲ್ಲ.
ಕಾಂಗ್ರೆಸ್ ಬಹುಮತದ ವಿಶ್ವಾಸ ಹೊಂದಿದ್ದು 2017 ರ ಚುನಾವಣೆಯಲ್ಲಿ ಮಾಡಿದ ತಪ್ಪುಗಳಿಂದ ಪಾಠ ಕಲಿಯಲು ಪಕ್ಷವು ಮುಂಚಿತವಾಗಿ ಅಪಾಯಿಂಟ್ಮೆಂಟ್ ಕೇಳಿದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
2017 ರ ಚುನಾವಣೆಯಲ್ಲಿ ಕಾಂಗ್ರೆಸ್ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಮೈತ್ರಿ ಮಾಡಿಕೊಳ್ಳಲು ವಿಳಂಬ ಮಾಡಿದ ಕಾರಣ ಸರ್ಕಾರವನ್ನು ರಚಿಸಲು ವಿಫಲವಾಯಿತು. ಬಿಜೆಪಿ, ಕಾಂಗ್ರೆಸ್ಗಿಂತ ಕಡಿಮೆ ಸ್ಥಾನಗಳನ್ನು ಗೆದ್ದಿದ್ದರೂ, ಮಹಾರಾಷ್ಟ್ರ ಗೋಮಾಂತಕ್ ಪಾರ್ಟಿ (ಎಂಜಿಪಿ) ಮತ್ತು ಸ್ವತಂತ್ರ ಶಾಸಕರು ಸೇರಿದಂತೆ ಸಣ್ಣ ಪಕ್ಷಗಳ ಬೆಂಬಲವನ್ನು ಗಳಿಸಿ ಸರ್ಕಾರ ರಚಿಸಿತು.