ಬೆಂಗಳೂರು, ಮಾ 09 (DaijiworldNews/DB): ಮೇಕೆದಾಟು ಯೋಜನೆ ಅನುಷ್ಠಾನವಾಗಬೇಕಾದರೆ ರಾಜ್ಯ ಸರಕಾರ ಕೇಂದ್ರದ ಮನವೊಲಿಸಬೇಕು. ಅದು ಬಿಟ್ಟು ಪಾದಯಾತ್ರೆ ಮಾಡುವುದರಿಂದ ನೀರು ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಚರ್ಚೆ ವೇಳೆ ಬುಧವಾರ ಮಾತನಾಡಿದ ಅವರು, ಮಹದಾಯಿ ಹೋರಾಟಗಾರರಿಗೆ ಪೊಲೀಸರಿಂದ ಹೊಡೆಸಿದವರು ಪ್ರಸ್ತುತ ’ನಮ್ಮ ನೀರು ನಮ್ಮ ಹಕ್ಕು’ ಎಂದು ಪಾದಯಾತ್ರೆ ಹೊರಟಿದ್ದಾರೆ. ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಿ ಎಂದು ಕೇಂದ್ರ ಸರಕಾರ ಎರಡು ರಾಜ್ಯಗಳಿಗೆ ಪದೇಪದೇ ಸೂಚಿಸಿದರೂ ಪಾದಯಾತ್ರೆ ಹೊರಟವರಿಗೆ ಅರ್ಥವಾಗುವುದಿಲ್ಲ. ಪಾದಯಾತ್ರೆ ಮಾಡಿದ ತತ್ ಕ್ಷಣ ನೀರು ಬಂದು ಬಿಡುವುದಿಲ್ಲ ಎಂದವರು ಕಾಂಗ್ರೆಸ್ ವಿರುದ್ಧ ಟೀಕೆ ವ್ಯಕ್ತಪಡಿಸಿದರು.