ನವದೆಹಲಿ, ಮಾ 02 (DaijiworldNews/DB): ಭಾರತ ಮಾತ್ರವಲ್ಲದೆ, ಪಾಕಿಸ್ತಾನ ಮತ್ತು ಟರ್ಕಿ ಮೂಲದ ವಿದ್ಯಾರ್ಥಿಗಳಿಗೂ ಉಕ್ರೇನ್ ನ ನೆರೆ ರಾಷ್ಟ್ರಗಳಿಗೆ ಸುರಕ್ಷಿತವಾಗಿ ತೆರಳಲು ಭಾರತದ ರಾಷ್ಟ್ರಧ್ವಜ ನೆರವಾಗಿದೆಯಂತೆ! ಉಕ್ರೇನ್ ನಿಂದ ರೊಮೇನಿಯದ ಬುಚರೆಸ್ಟ್ ನಗರಕ್ಕೆ ಬಂದಿಳಿದ ಭಾರತೀಯ ವಿದ್ಯಾರ್ಥಿಗಳು ಈ ವಿಚಾರವನ್ನು ತಿಳಿಸಿದ್ದಾರೆ.
ಉಕ್ರೇನ್ ನ ನೆರೆ ರಾಷ್ಟ್ರಗಳ ಮೂಲಕ ಆಪರೇಷನ್ ಗಂಗಾ ಕಾರ್ಯಾಚರಣೆಯಡಿ ಭಾರತಕ್ಕೆ ಮರಳಲು ಭಾರತದ ವಿದ್ಯಾರ್ಥಿಗಳು ರೊಮೆನಿಯಾದ ಬುಚರೆಸ್ಟ್ ನಗರಕ್ಕೆ ಆಗಮಿಸಿದ್ದು, ಈ ವೇಳೆ ಭಾರತದ ರಾಷ್ಟ್ರಧ್ವಜವು ಭಾರತ ಮಾತ್ರವಲ್ಲದೆ, ಪಾಕಿಸ್ತಾನ, ಟರ್ಕಿ ವಿದ್ಯಾರ್ಥಿಗಳಿಗೆ ಯುದ್ಧಗ್ರಸ್ಥ ದೇಶದ ಚೆಕ್ ಪಾಯಿಂಟ್ ಗಳನ್ನು ಸುರಕ್ಷಿತವಾಗಿ ದಾಟಲು ಹೇಗೆ ನೆರವಿಗೆ ಬಂತು ಎಂಬುದರ ಕುರಿತು ಮಾತನಾಡಿದ್ದಾರೆ. ಏರ್ ಇಂಡಿಯಾ, ಸ್ಪೈಸ್ ಜೆಟ್ ಮತ್ತು ಇಂಡಿಗೋ ವಿಮಾನಗಳು ಕಾರ್ಯಾಚರಣೆಯಲ್ಲಿ ಹಾರಾಟ ನಡೆಸಲಿವೆ.
’ನಾವು ಭಾರತೀಯರಾಗಿ ದೇಶದ ರಾಷ್ಟ್ರಧ್ವಜವನ್ನು ಹಿಡಿದುಕೊಂಡರೆ ಯಾವುದೇ ಸಮಸ್ಯೆ ಇಲ್ಲದೆ ಬರಬಹುದು’ ಎನ್ನುತ್ತಾರೆ ಉಕ್ರೇನ್ ನ ಒಡೆಸಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಭಾರತ ಮೂಲದ ವಿದ್ಯಾರ್ಥಿ.
"ನಾನು ಮಾರುಕಟ್ಟೆಗೆ ತೆರಳಿ ಕೆಲವು ಬಣ್ಣ ಮತ್ತು ಕರ್ಟೈನ್ ಗಳನ್ನು ಖರೀದಿಸಿದೆ. ಬಳಿಕ ಕರ್ಟೈನ್ ಗಳನ್ನು ಕತ್ತರಿಸಿ ಕೇಸರಿ, ಬಿಳಿ, ಹಸಿರು ಬಣ್ಣ ಬಳಿದು ಭಾರತದ ತಿರಂಗಾವನ್ನು ಸಿದ್ಧಪಡಿಸಿದೆ. ಇದನ್ನೇ ಹಿಡಿದುಕೊಂಡು ನಾವು ಅಲ್ಲಿನ ಚೆಕ್ ಪಾಯಿಂಟ್ ಗಳನ್ನು ಸುರಕ್ಷಿತವಾಗಿ ದಾಟಿದೆವು. ಪಾಕಿಸ್ತಾನ ಮತ್ತು ಟರ್ಕಿ ಮೂಲದ ಕೆಲವು ವಿದ್ಯಾರ್ಥಿಗಳೂ ನಮ್ಮ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಸುರಕ್ಷಿತವಾಗಿ ಯುಕ್ರೇನ್ ನಿಂದ ಮರಳಿದ್ದಾರೆ’ ಎಂದು ಇನ್ನೋರ್ವ ವಿದ್ಯಾರ್ಥಿ ಮಾಹಿತಿ ನೀಡಿದರು.
ಒಡೆಸಾದಲ್ಲಿದ್ದ ವಿದ್ಯಾರ್ಥಿಗಳು ಮೊಲೊಡೊವಾದಿಂದ ರೊಮೇನಿಯಾಕ್ಕೆ ತೆರಳಿದ್ದಾರೆ. ’ನಾವು ಒಡೆಸಾದಿಂದ ಬಸ್ ಮುಖಾಂತರ ಮೊಲೊಡೊವಾ ಗಡಿಗೆ ಬಂದಿಳಿದಿದ್ದೇವೆ. ಮೊಲೊಡೊವಾ ನಾಗರಿಕರು ತುಂಬಾ ಒಳ್ಳೆಯವರು. ನಮಗೆ ಉಚಿತ ವಸತಿ ನೀಡಿ, ರೊಮೇನಿಯಾಕ್ಕೆ ತೆರಳಲು ಟ್ಯಾಕ್ಸಿ ಮತ್ತು ಬಸ್ ಹಿಡಿಯಲು ನೆರವಾಗಿದ್ದಾರೆ. ಅಲ್ಲದೆ, ಭಾರತೀಯ ರಾಯಭಾರಿ ಕಚೇರಿಯು ಮೊಲೊಡೊವಾದಲ್ಲಿ ಬಂದಿಳಿದ ಭಾರತೀಯರಿಗೆ ಸೂಕ್ತ ವ್ಯವಸ್ಥೆ ಮಾಡಿದ್ದರಿಂದ ಅಲ್ಲಿ ಯಾವುದೇ ಸಮಸ್ಯೆ ಉಂಟಾಗಲಿಲ್ಲ’ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಭಾರತಕ್ಕೆ ಮರಳುವವರೆಗೆ ಆಹಾರ-ವಸತಿಗೆ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ನೋಡಿಕೊಂಡ ಭಾರತೀಯ ರಾಯಭಾರಿ ಕಚೇರಿಗೆ ಇದೇ ವೇಳೆ ವಿದ್ಯಾರ್ಥಿಗಳು ಧನ್ಯವಾದ ಅರ್ಪಿಸಿದ್ದಾರೆ.