ನವದೆಹಲಿ, ಮಾ 02 (DaijiworldNews/DB): ಯುದ್ಧ ಪೀಡಿತ ಉಕ್ರೇನ್ ನ ಕೀವ್ ನಲ್ಲಿ ಸಿಲುಕಿರುವ ಎಲ್ಲಾ ಭಾರತೀಯರು ಸುರಕ್ಷಿತವಾಗಿ ರಾಜಧಾನಿಯನ್ನು ತೊರೆದಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಹರ್ಷ ವರ್ಧನ್ ಶೃಂಗ್ಲಾ ಮಾಹಿತಿ ನೀಡಿದ್ದಾರೆ.
ಮುಂದಿನ ಮೂರು ದಿನಗಳಲ್ಲಿ ಭಾರತೀಯರ ತೆರವು ಕಾರ್ಯಾಚರಣೆ ನಡೆಯಲಿದ್ದು, ಇದಕ್ಕಾಗಿ 26 ವಿಮಾನಗಳ ಹಾರಾಟ ನಡೆಯಲಿದೆ. ಅಲ್ಲದೆ, ತೆರವು ಕಾರ್ಯಾಚರಣೆಗೆ ನೆರವಾಗುವಂತೆ ಭಾರತೀಯ ವಾಯುಸೇನೆಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಮನವಿ ಮಾಡಿದ್ದು, ವಾಯುಸೇನೆಯ ಸಿ-17 ವಿಮಾನಗಳನ್ನು ಬಳಸಿಕೊಳ್ಳುವ ಸಾಧ್ಯತೆಯೂ ಇದೆ ಎಂದವರು ತಿಳಿಸಿದ್ಧಾರೆ.
ಈಗಾಗಲೇ ಉಕ್ರೇನ್ ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ವಿದ್ಯಾರ್ಥಿಗಳು ಸೇರಿದಂತೆ ಯಾವುದೇ ಭಾರತೀಯರಿಗೆ ಮುಂದೆ ತೊಂದರೆ ಉಂಟಾಗಬಾರದು ಎಂಬ ನಿಟ್ಟಿನಲ್ಲಿ ’ಆಪರೇಷನ್ ಗಂಗಾ’ ಕಾರ್ಯಾಚರಣೆಯನ್ನು ಕೇಂದ್ರ ಸರಕಾರ ಮತ್ತಷ್ಟು ತ್ವರಿತಗೊಳಿಸಲಿದೆ. ಹಾರ್ಕಿವ್ ಮತ್ತು ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಸಿಲುಕಿರುವ ಎಲ್ಲಾ ಭಾರತೀಯರ ತುರ್ತು ತೆರವಿಗೆ ರಷ್ಯಾ ಮತ್ತು ಉಕ್ರೇನ್ ರಾಯಭಾರಿಗಳನ್ನು ಆಗ್ರಹಿಸಲಾಗುವುದು. ಈಗಾಗಲೇ ಫ್ರಾನ್ಸ್ ಮತ್ತು ಪೋಲೆಂಡ್ ಅಧ್ಯಕ್ಷರ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಾತುಕತೆ ನಡೆಸಿದ್ದಾರೆ ಎಂದು ಶೃಂಗ್ಲಾ ತಿಳಿಸಿದ್ದಾರೆ.