ಬೆಂಗಳೂರು, ಫೆ 23 (DaijiworldNews/KP): ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿರುವುದನ್ನು ಪ್ರಶ್ನಿಸಿರುವ ಮನವಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ನ ತ್ರಿಸದಸ್ಯ ಪೂರ್ಣ ಪೀಠವು ಇಂದು ವಿಚಾರಣೆ ನಡೆಸಿತು. ಸರ್ಕಾರದ ಪರ ವಾದ ಹಾಗೂ ಶಿಕ್ಷಕರ ಪರ ವಾದವನ್ನು ಆಲಿಸಿದ ನ್ಯಾಯಪೀಠವು, ಅರ್ಜಿಯ ವಿಚಾರಣೆಯನ್ನು ಮತ್ತೆ ನಾಳೆಗೆ ಮುಂದೂಡಿದೆ.
ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರನ್ನೊಳಗೊಂಡ ಪೀಠದ ಮುಂದೆ ಇಂದು ಕೂಡ ಹಿಜಾಬ್ ಅನುಮತಿ ಕೋರಿ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆಯನ್ನು ನಡೆಸಿತು
ಇನ್ನು ಮುಖ್ಯನ್ಯಾಯಮೂರ್ತಿಗಳು ನಮಗೆ ಸಹಾಯದ ಅಗತ್ಯವಿಲ್ಲ, ಆದರೆ ಅನೇಕ ಮಧ್ಯಸ್ಥಿಕೆದಾರರು ಬಂದಿರುವುದರಿಂದ, ಲಿಖಿತ ಸಲ್ಲಿಕೆಗಳನ್ನು ನೀಡಲು ನಾವು ವಿನಂತಿಸುತ್ತೇವೆ. ನಾವು ಈ ವಿಷಯವನ್ನು ಆರು ತಿಂಗಳವರೆಗೆ ಕೇಳಲು ಸಾಧ್ಯವಿಲ್ಲ ಎಂದರು.
ಇದಕ್ಕೆ ಹಿರಿಯ ವಕೀಲರಾದಂತ ಪೂವಯ್ಯ, ತಾರತಮ್ಯವನ್ನು ನಿವಾರಿಸಲು ನೀವು ಶ್ರೀಮಂತರಾಗಿರಬಹುದು ಅಥವಾ ಬಡವರಾಗಿರಬಹುದು, ಹಿಂದೂ ಅಥವಾ ಮುಸ್ಲಿಂ ಆಗಿರಬಹುದು, ಶಾಲೆ ಎಂದರೆ ಒಂದೇ ಸಮವಸ್ತ್ರವನ್ನು ಧರಿಸಬೇಕು, ಇದರಿಂದ ಸಮಾನತೆಯ ದೃಷ್ಟಿಯಿಂದ ಎಲ್ಲರನ್ನು ಕಾಣಬಹುದು ಎಂದು ಹೇಳಿದರು.
ಅಲ್ಲದೇ ಪೂವಯ್ಯ ಶಾಲೆಯ ಒಳಗೆ ಯಾವುದೇ ಧರ್ಮಗಳನ್ನು ಅನುಮತಿಸುವುದಿಲ್ಲ. ಶಾಲೆ ಎಂದರೆ ಅದು ಜಾತ್ಯತೀತವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು, ಯಾವುದೇ ಧಾರ್ಮಿಕ ಸಂಕೇತಗಳು ನನ್ನ ಶಾಲಾ ಕ್ಯಾಂಪಸ್ಗೆ ಒಳಗೆ ಪ್ರವೇಶವಾಗದಂತೆ ನೋಡಿಕೊಳ್ಳಲು ನಾನು ಬಾಧ್ಯಸ್ಥನಾಗಿದ್ದೇನೆ. ಅಲ್ಲದೆ ಆ ಹಕ್ಕು ನನಗಿದೆ ಎಂದು ನ್ಯಾಯಪೀಠದ ಮುಂದೆ ವಾದ ಮಂಡಿಸಿದರು.