ಮುಂಬೈ, ಫೆ 20 (DaijiworldNews/MS): ಎನ್ಸಿಬಿ ಮುಂಬೈ ವಲಯದ ಮಾಜಿ ಪ್ರಾದೇಶಿಕ ನಿರ್ದೇಶಕ ಸಮೀರ್ ವಾಂಖೆಡೆ ಒಡೆತನದ ನವಿ ಮುಂಬೈ ಮೂಲದ ಹೋಟೆಲ್ ಮತ್ತು ಬಾರ್ಗೆ ನೀಡಿದ್ದ ಪರವಾನಿಗೆ ತಪ್ಪು ಮಾಹಿತಿ ಹಾಗೂ ವಂಚನೆಯ ಮೂಲಕ ಪಡೆಯಲಾಗಿದೆ ಎಂಬ ಆರೋಪದ ಮೇಲೆ ವಾಂಖೆಡೆ ವಿರುದ್ಧ ಥಾಣೆ ಪೊಲೀಸರು ಎಫ್ ಐಆರ್ ದಾಖಲಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಇತ್ತೀಚಿಗೆ ಪರವಾನಗಿ ರದ್ದುಪಡಿಸಿದ ಜಿಲ್ಲಾಧಿಕಾರಿ ರಾಜೇಶ್ ನಾರ್ವೇಕರ , ತಪ್ಪು ಮಾಹಿತಿ ನೀಡಿ ವಂಚನೆಯಿಂದ ಲೈಸೆನ್ಸ್ ಪಡೆಯಲಾಗಿದೆ ಎಂದು ಆರೋಪಿಸಿದ್ದರು.
ರಾಜ್ಯ ಅಬಕಾರಿ ಅಧಿಕಾರಿಗಳ ದೂರಿನ ಮೇರೆಗೆ ವಂಚನೆ ಅಪರಾಧಕ್ಕಾಗಿ ಕೊಪ್ರಿ ಪೊಲೀಸ್ ಠಾಣೆಯಲ್ಲಿ ಶನಿವಾರ ರಾತ್ರಿ ವಾಂಖೆಡೆ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಥಾಣೆ ಉಪ ಪೊಲೀಸ್ ಆಯುಕ್ತ ಡಾ, ವಿನಯ್ಕುಮಾರ್ ರಾಥೋಡ್ ತಿಳಿಸಿದ್ದಾರೆ.
ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಕಳೆದ ವರ್ಷ ನವೆಂಬರ್ನಲ್ಲಿ ವಾಂಖೆಡೆ ಅವರು ನವಿ ಮುಂಬೈನ ವಾಶಿಯಲ್ಲಿ ಪರ್ಮಿಟ್ ರೂಮ್ ಮತ್ತು ಬಾರ್ ಅನ್ನು ಹೊಂದಿದ್ದರು ಎಂದು ಆರೋಪಿಸಿದ್ದರು . ವಾಖೆಂಡೆ ಅಪ್ರಾಪ್ತರಾಗಿದ್ದಾಗ 1997 ರಲ್ಲಿ ಪರವಾನಗಿ ಪಡೆದಿದ್ದರು ಮತ್ತು ಸರ್ಕಾರಿ ಉದ್ಯೋಗದಲಿದ್ದರೂ ವಾಂಖೆಡೆ ಪರ್ಮಿಟ್ ರೂಮ್ ನಡೆಸಲು ಲೈಸೆನ್ಸ್ ನ್ನು ಪಡೆದಿರುವುದು ಸೇವೆಯ ನಿಯಮಗಳಿಗೆ ವಿರುದ್ಧವಾದದ್ದು ಎಂದು ಮಲೀಕ್ ಹೇಳಿದ್ದರು. ಆದರೆ ಸಮೀರ್ ಮಲಿಕ್ ಮಾಡಿರುವ ಆರೋಪ ಅಲ್ಲಗಳೆದಿದ್ದರು.