ತಿರುವನಂತಪುರ, ಫೆ 12 (DaijiworldNews/HR): ವಿದ್ಯಾರ್ಥಿಗಳು ಶಾಲೆಗೆ ಸೇರಿದ್ದಾರೆ ಎಂದ ಮೇಲೆ ಅಲ್ಲಿನ ಸಮವಸ್ತ್ರವನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದರೆ ಬೇರೆ ಶಾಲೆಗೆ ಸೇರಬೇಕು. ಹಿಂದಿನ ಸರಕಾರ ನಿಯಮ ಮೀರುವವರ ಮುಂದೆ ತಲೆ ಬಾಗುತ್ತಿತ್ತು. ಆದರೆ ಈಗಿನ ಸರಕಾರ ಹಾಗಿಲ್ಲ ಎಂದು ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ಮೊದಲೆಲ್ಲ ಹೆಣ್ಣು ಮಕ್ಕಳನ್ನು ಭೂಮಿಯಡಿ ಹೂತಿಡುತ್ತಿದ್ದರು. ಈಗ ಅವರನ್ನು ಶಾಲು, ತ್ರಿವಳಿ ತಲಾಖ್ ಹೆಸರಲ್ಲಿ ತುಳಿಯಲಾಗುತ್ತಿದೆ" ಎಂದರು.
ಇನ್ನು ಹಿಂದೆ ಮುಸ್ಲಿಂ ಪ್ರವಾದಿಯೊಬ್ಬರ ಮನೆಯ ಹೆಣ್ಣು ಮಗಳೇ ಹಿಜಾಬ್ ಧರಿಸುವುದಕ್ಕೆ ನಿರಾಕರಿಸಿದ್ದಳು. ನಾನು ಸುಂದರವಾಗಿದ್ದೇನೆ. ದೇವರು ನನ್ನಲ್ಲಿ ಸೌಂದರ್ಯ ತುಂಬಿದ್ದಾನೆ. ಅದನ್ನು ನಾನು ಬೇರೆಯವರಿಗೆ ತೋರಿಸಲೇಬೇಕೆಂದು ವಾದಿಸಿದ್ದಳು. ಇಸ್ಲಾಂನ ಮೊದಲ ತಲೆಮಾರಿನ ಹೆಣ್ಣು ಮಕ್ಕಳು ಇದ್ದಿದ್ದು ಹೀಗೆ ಎಂದು ಇತಿಹಾಸವನ್ನೂ ನೆನಪಿಸಿದ್ದಾರೆ.