ನವದೆಹಲಿ, ಫೆ11(DaijiworldNews/MS): ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ಈಗಾಗಲೇ ಮಧ್ಯಂತರ ಆದೇಶವನ್ನು ಪ್ರಕಟಿಸಿದೆ. ಈ ನಡುವೆ ಹೈಕೋರ್ಟ್ನ ಮಧ್ಯಂತರ ಆದೇಶವನ್ನು ಪ್ರಶ್ನೆ ಮಾಡಿ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಹಿಜಾಬ್ ವಿವಾದದಲ್ಲಿ ಮಧ್ಯಪ್ರವೇಶಕ್ಕೆ ಸುಪ್ರೀಂಕೋರ್ಟ್ ನಕಾರ ತೋರಿದೆ. ಮಾತ್ರವಲ್ಲದೆ ಈ ವಿವಾದವನ್ನು ರಾಷ್ಟ್ರ ಮಟ್ಟಕ್ಕೆ ಹರಡಬೇಡಿ ಎಂದು ಕಿವಿಮಾತು ಹೇಳಿದೆ.
ಕರ್ನಾಟಕ ಹೈಕೋರ್ಟ್ನ ತ್ರಿಸದಸ್ಯ ಪೀಠ ಹಿಜಾಬ್ ವಿವಾದದ ಬಗ್ಗೆ ಮಧ್ಯಂತರ ಆದೇಶ ನೀಡಿತ್ತು. ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ತ್ರಿಸದಸ್ಯ ಪೀಠ ಮುಂದಿನ ಆದೇಶದವರೆಗೂ ಯಾವುದೇ ಕಾರಣಕ್ಕೂ ಶಾಲೆಗಳಿಗೆ ಯಾವುದೇ ಧಾರ್ಮಿಕ ಚಿಹ್ನೆಗಳನ್ನ ಬಳಸುವಂತಿಲ್ಲ ಎಂದಿತ್ತು. ಶಾಲೆಗಳಿಗೆ ಸಮವಸ್ತ್ರ ಮಾತ್ರ ಧರಿಸಿಕೊಂಡು ಹೋಗಬೇಕು ಎಂದು ಹೇಳಿತ್ತು.
ಈ ಅರ್ಜಿಯ ತುರ್ತು ವಿಚಾರಣೆಯನ್ನು ನಿರಾಕರಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ, "ಈ ವಿಚಾರಗಳನ್ನು ರಾಷ್ಟ್ರ ಮಟ್ಟಕ್ಕೆ ಹರಡಬೇಡಿ. ಸೂಕ್ತ ಸಮಯದಲ್ಲಿ ಮಾತ್ರ ನಾವು ಮಧ್ಯಪ್ರವೇಶಿಸುತ್ತೇವೆ.ಈ ಪ್ರಕರಣ ದೂರಗಾಮಿ ಪರಿಣಾಮಗಳನ್ನುಹೊಂದಿದೆ. ಮೊದಲು ಹೈಕೋರ್ಟ್ ನ ವಿಚಾರಣೆ ಮುಗಿಸಲಿ ಎಂದು ಹೇಳಿದೆ.